ಕೈಕಂಬ: ಗುರುಪುರ ಗೋಳಿದಡಿ ಗುತ್ತಿನಲ್ಲಿ ಪರ್ಬೋದ ಸಂಭ್ರಮಕ್ಕೆ ಗುರುವಾರ ಬೆಳಿಗ್ಗೆ ಸಡಗರದಿಂದ ಚಾಲನೆ ನೀಡಲಾಯಿತು.ಪರ್ಬೊದ ಸಂಭ್ರಮಕ್ಕೆ ಗಾಜಿನ ಬಳೆಗಳು ಮೆರುಗನ್ನು ನೀಡಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಮುತ್ತೈದೆಯರು ಶಾಷ್ತ್ರೋಕ್ತವಾಗಿ, ಸಂಪ್ರದಾಯದಂತೆ ಗಾಜಿನ ಬಳೆಗಳನ್ನು ತೊಡಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ ಶುದ್ದಿ ಪ್ರಕ್ರಿಯೆ, ವಾಸ್ತು ಶುದ್ದಿ ಸಹಿತ ವಿವಿಧ ವೇದೋಕ್ತ ವಿಧಿವಿಧಾನಗಳು ನಡೆದ ಬಳಿಕ ರುದ್ರಯಾಗ ನಡೆಯಿತು. 12 ಗಂಟೆಗೆ ಪಲ್ಲ ಪೂಜೆಯ ಬಳಿಕ ನಡೆದ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಸ್ವಾದಿಸ್ಟಕರವಾದ ಬಾಳೆ ಎಲೆ ಊಟ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ಗಂಟೆವರೆಗೆ ಜಿಲ್ಲೆಯ ವಿವಿಧ ತಂಡಗಳು ಭಜನಾ ಸಂಕೀರ್ತನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಮಧ್ಯಾಹ್ನ2:30 ರಿಂದ ಮಂಗಳೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರಿಂದ ಶ್ರೀಶಿವ ಮಹಾತ್ಮೆ ಎಂಬ ಶಿವಕಥೆಯ ಯಕ್ಷಗಾನ ಪ್ರದರ್ಶನ ನಡೆಯಿತು.

ಸಂಜೆ 5ರಿಂದ 7ರವರೆಗೆ ವೇದಾಂತಿ ಡಾ.ಬಿ.ವಿ. ಕುಮಾರಸ್ವಾಮಿ ಬೆಂಗಳೂರು ಇವರು ಭಗವದ್ಗೀತಾ ಪ್ರವಚನ ನಡೆಸಿಕೊಟ್ಟರುರಾತ್ರಿ 7ರಿಂದ ಕುಮಾರಿ ರಶ್ಮಿ ರವಿ ಭಟ್ ಎರ್ಮಾಳ್ ಮತ್ತು ಅಕ್ಷತಾ ಬೈಕಾಡಿಯವರಿಂದ ಭರತನಾಟ್ಯ ಜನರ ಮನ ಸೂರೆಗೊಂಡಿತು.
ರಾತ್ರಿ 8ರಿಂದ ಮಂಗಳೂರಿನ ಸನಾತನ ನಾಟ್ಯಾಲಯದವರಿಂದ ‘ಸನಾತನ ನೃತ್ಯಾoಜಲಿ’ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಆಗಮಿಸದ ಪ್ರತಿಯೊಬ್ಬ ಭಕ್ತರಿಗೂ ಕಲ್ಲಂಗಡಿ ಹಣ್ಣನ್ನು ಪ್ರಸಾದ ರೂಪವಾಗಿ ಹಂಚಲಾಯಿತು.
ಗೋಳಿದಡಿ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಶ್ರೀ ಗುರು ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ)ನ ಕಾರ್ಯದರ್ಶಿ ಶ್ರೀಮತಿ ಉಷಾ ಪ್ರಸಾದ ಶೆಟ್ಟಿ ಮತ್ತು ಟ್ರಷ್ಟಿಗಳು, ಚಾವಡಿ ಮಿತ್ರರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
