ಬಂಟ್ವಾಳ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಪತ್ನಿಯ ಚಿಕಿತ್ಸೆ ಹಣ ನೀಡಿದ ಸಾರ್ವಜನಿಕರು

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರ ಪತ್ನಿ ಅವರಿಗೆ ತಲೆಯ ಭಾಗದ ನರದ ತೊಂದರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಪತ್ನಿಯ ಚಿಕಿತ್ಸೆಗಾಗಿ ಕಷ್ಟಪಡುತ್ತಿದ್ದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಸಹೃದಯ ಜನತೆ ಮಿಡಿದಿದ್ದು, 5.30 ಲಕ್ಷ ರು.ಗಳಷ್ಟು ನೆರವಿನ ಮೊತ್ತ ಸಂಗ್ರಹ ಮಾಡಿದ್ದಾರೆ. ನರದ ತೊಂದರೆಯಿಂದ ಅಮೈ ಮಹಾಲಿಂಗ ನಾಯ್ಕರ ಪತ್ನಿ ಒಂದು ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬೇಕಾಗಿರುವ ಕಾರಣ ಅವರನ್ನು ಮಂಗಳೂರಿನ ಅಡ್ಯಾರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ಚಿಕಿತ್ಸೆ 2.62 ಲಕ್ಷ ಆಗಿದೆ. ಅಲ್ಲಿನ ಚಿಕಿತ್ಸೆಗೆ ಅಮೈ ಮಹಾಲಿಂಗ ನಾಯ್ಕ ಸಾಲ ಮಾಡಿ ನೀಡಿದ್ದಾರೆ.
ಈ ಬಳಿಕ ಇನ್ನು ಅವರ ಚಿಕಿತ್ಸೆಗೆ ಹಣ ಬೇಕಿದ್ದ ಕಾರಣ ದಾನಿಗಳು ಮೊರೆ ಹೋಗಿದ್ದಾರೆ. ಅಮೈ ಮಹಾಲಿಂಗ ನಾಯ್ಕರ ಸಂಬಂಧಿಸಿಕರು 70 ಸಾವಿರ ರೂ. ನೀಡಿದ್ದರು. ಆಸ್ಪತ್ರೆ ಮೊತ್ತ ಒಟ್ಟು 5.30 ಲಕ್ಷ ರು. ಆಗಿತ್ತು. ಅದರಲ್ಲಿ 70 ಸಾವಿರ ರು. ಮೊತ್ತವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಮನವಿ ಮೇರೆಗೆ ವಿನಾಯ್ತಿ ನೀಡಿದ್ದರು. ಉಳಿದ ಮೊತ್ತವನ್ನು ಅಮೈ ಮಹಾಲಿಂಗ ನಾಯ್ಕರು ಪಾವತಿಸಿದ್ದಾರೆ. ಅವರ ಪತ್ನಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಔಷಧ ಮತ್ತಿತರ ಕಾರಣಕ್ಕೆ ಬೇರೆಯೇ ವೆಚ್ಚ ಆಗಿದೆ. ಸಮಾಜದಿಂದ ಉದಾರವಾಗಿ ಆರ್ಥಿಕ ನೆರವು ನೀಡಿರುವುದಕ್ಕೆ ಅಮೈ ಮಹಾಲಿಂಗ ನಾಯ್ಕರ ಕುಟುಂಬಸ್ಥರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.