ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ
ಬಂಟ್ವಾಳ: ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನರ್ ನವೀಕರಣ ಕಾರ್ಯಗಳು ನಿರ್ವಿಘ್ನವಾಗಿ ನಿರೀಕ್ಷಿತ ಸಮಯದಲ್ಲಿ ವೈಭವಯುತವಾಗಿ ನಡೆಯಲಿ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಶುಭಹಾರೈಸಿದರು.

ಅವರು ಪೆರಾಜೆ, ಮಾಣಿ ಮತ್ತು ಅರೆಬೆಟ್ಟು ಮೂರು ಗ್ರಾಮಗಳಿಗೆ ಸೇರಿದ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮ, ಸಂಸ್ಕೃತಿಗಳು ಉಳಿಯಬೇಕಾದರೆ ದೇವಸ್ಥಾನಗಳು ಬೆಳಗಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡಿದರೆ, ದೇವರು ರಕ್ಷಣೆ ಮಾಡುತ್ತಾರೆ ಎಂದು ತಿಳಿಸಿದರು.
ಹಿಂದು ಸಮಾಜ ಅಪಾಯದಲ್ಲಿದ್ದು,ದೇವಸ್ಥಾನದ ಬ್ರಹ್ಮಕಲಶದ ಹೆಸರಿನಲ್ಲಿ ಹಿಂದೂಗಳು ಒಗ್ಗಟ್ಟಾಗಿರಲು ಕೆಲಸ ಮಾಡಬೇಕಾಗಿದೆ. ದೇವಸ್ಥಾನಗಳು ನಿರ್ಮಾಣವಾಗುತ್ತಿರುವುದು ಜಗತ್ತಿನ ಹಿತಕ್ಕೋಸ್ಕರ ಎಂದು ತಿಳಿದು ಈ ಪುಣ್ಯಕಾರ್ಯದಲ್ಲಿ ಎಲ್ಲಾರೂ ಪಾಲ್ಗೊಳ್ಳ ಬೇಕೆಂದರು.
ಹಿರಿಯರಾದ ಶಂಕರನಾರಾಯಣ ಘನಪಾಠಿಗಳು ಮಾತನಾಡಿ, ಮಕ್ಕಳಿಗೆ ಧರ್ಮ,ಸಂಸ್ಕಾರವನ್ನು ತಿಳಿಸುವ ಕಾರ್ಯ ನಮ್ಮಿಂದಾಗಬೇಕಾಗಿದೆ. ಸ್ವಾರ್ಥ ರಹಿತವಾಗಿ ದೇಶದ ಅಭಿವೃದ್ಧಿಯ ಕೆಲಸದಲ್ಲಿ ಮುಂದಿನ ಜನಾಂಗ ಜೊತೆಯಾಗಲಿ ಎಂದು ಶುಭಹಾರೈಸಿದರು.
ಸುಮಾರು 2.3 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುವ ಈ ದೇವಾಲಯದ ನೀಲನಕಾಶೆ ತಯಾರಿಸಿದ ಜಗನ್ನಿವಾಸ ರಾವ್ ದೇವಾಲಯದ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು.ಜೀರ್ಣೋದ್ಧಾರ ಅಂಗವಾಗಿ ದೇಣಿಗೆ ನೀಡಿದ ದಾನಿಗಳಿಗೆ ರಶೀದಿ ನೀಡಿ ಗೌರವಿಸಲಾಯಿತು.
ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸಚಿನ್ ರೈ ಮಾಣಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುಷ್ಪರಾಜ ಚೌಟ ಮಾಣಿ , ಗೌರವ ಸಲಹೆಗಾರ ಬಿ.ಟಿ.ನಾರಾಯಣ ಭಟ್, ಜಗನ್ನಾಥ ಚೌಟ ಬದಿಗುಡ್ಡೆ,ಗೌರವ ಕೋಶಾಧಿಕಾರಿ ಡಾ| ಶ್ರೀನಾಥ್ ಆಳ್ವ ಪೆರಾಜೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಗೋಪಾಲ ಮೂಲ್ಯ ನೆಲ್ಲಿ,ಸಂದೀಪ್ ಶೆಟ್ಟಿ ಅರೆಬೆಟ್ಟು, ಕುಶಲ ಎಂ.ಪೆರಾಜೆ,ಹರೀಶ್ ರೈ ಪಾಣೂರು,ದೀಪಕ್ ಪೆರಾಜೆ,ಲಕ್ಮೀಶ ನಾಯ್ಕ, ಶ್ರೀನಿವಾಸ ಪೆರಾಜೆ,ರಾಘವ ಗೌಡ, ನಾರಾಯಣ ಎಂ.ಪಿ. ಮಾಧವ ಕುಲಾಲ್, ನಾರಾಯಣ ಶೆಟ್ಟಿ ತೋಟ, ರವೀಂದ್ರ ರೈ ಮಂಜೊಟ್ಟಿ ಉಮೇಶ್ ಎಸ್.ಪಿ., ದಿವಾಕರ ಗೌಡ ಶಾಂತಿಲ, ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜಾರಾಮ ಕಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪನ್ಯಾಸಕ ಯತಿರಾಜ ಪೆರಾಜೆ ಸ್ವಾಗತಿಸಿ,ವಂದಿಸಿದರು.