ಕೈಕಂಬ: ಉಳಾಯಿಬೆಟ್ಟುವಿನಲ್ಲಿ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಪರಾರಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಕೂಡಾ ಭಾಗವಹಿಸಿದ್ದು, ಈ ವೇಳೆ ನಡೆದ ಕಲ್ಲು ತೂರಾಟ ನಡೆದ ಘಟನೆಯಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ, ಅಲ್ಲದೆ ಬಸ್ ಜಖಂಗೊಂಡಿದ್ದು, ಸದ್ಯದ ಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಹಿಂದೂ ಸಂಘಟನೆಗಳು ಉಳಾಯಿಬೆಟ್ಟುವಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ಡಿ.8ರಂದು ವಾಮಂಜೂರು, ಗುರುಪು, ಎಡಪದವು, ಅಡ್ಡೂರು, ಮರವೂರು ಮುಂತಾದ ಪ್ರದೇಶವನ್ನಿಟ್ಟುಕೊಂಡು ಆಯ್ದ ಪ್ರದೇಶದಲ್ಲಿ ಬಂದ್ಗೆ ಕರೆ ನೀಡಲಾಗಿತ್ತು. ಪರಿಸ್ಥಿತಿಯನ್ನು ಮನಗಂಡ ಜಿಲ್ಲಾ ಪೊಲೀಸ್ ಕಮೀಷನರ್ ಆರ್ ಹಿತೇಂದ್ರ ಅವರು ಸೆಕ್ಷನ್ 144ಗೆ ಆದೀಶಿಸಿದ್ದರು. ಆದರೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗುರುಪುರದ ಪರಾರಿ ಸಮೀಪ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದು, ಇದೇ ಪ್ರತಿಭಟನೆಯಲ್ಲಿ ಶಾಂತಿಭಂಗ ಉಂಟಾಗಿತ್ತು.
ಅಷ್ಟಕ್ಕೂ ನಡೆದಿದ್ದೇನು?
ಉಳಾಯಿಬೆಟ್ಟುಗೆ ಹೋಗುವ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭಾಷಣ ಮುಗಿಸಿ ಎಲ್ಲರನ್ನೂ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದರೂ, ಅಷ್ಟರಲ್ಲಿ ತಾಳ್ಮೆಯ ಕಟ್ಟೆಯೊಡೆದ ಬ್ಯಾರಿಕೇಡ್ ನುಗ್ಗಲು ಯತ್ನಿಸಿದ್ದಾರೆ. ಇದೇ ವೇಳೆ ಮೊಯ್ದೀನ್ ಬಾವಾ ಅವರ ಬ್ಯಾನರ್ ಕಂಡ ಯುವಕರು ಅದರತ್ತ ಕಲ್ಲು ತೂರಾಟ ನಡೆಸಿದರು. ಈ ವೇಳೆ ತಾಳ್ಮೆಯ ಕಟ್ಟೆಯೊಡೆದಿದ್ದ ಯುವಕರು ಎಲ್ಲೆಂದೆಲ್ಲಿಗೆ ಮನಮಂದಂತೆ ಕಲ್ಲುತೂರಾಟ ನಡೆಸಿದರು. ಇದು ತಾನು ಹೊಡೆದ ಕಲ್ಲು ತನ್ನ ಮೇಲೆಯೇ ಬೀಳುವಂತಾಯ್ತು. ಕಲ್ಲೇಟಿನಿಂದ ಹಲವರು ಗಾಯಗೊಂಡರೆ, ಪೊಲೀಸ್ ವಾಹನಗಳ ಗಾಜು ಪುಡಿಪುಡಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದು ಪರಿಣಾಮ ಯುವಕರೆಲ್ಲಾ ದಿಕ್ಕಾಪಾಲಾಗಿ ಒಡಿದ್ದಾರೆ. ಈ ವೇಳೆ ಓಡಲಾಗದ ಮಹಿಳೆಯರು ರಸ್ತೆಯಲ್ಲೇ ಬಿದ್ದು ಗಾಯಗೊಂಡರೆ ಉಳಾಯಿಬೆಟ್ಟುವಿನ ನಿವಾಸಿ ನಳಿನಿ ಎಂಬವರ ಕಾಲು ತುಂಡಾಗಿದೆ. ಅಲ್ಲದೆ ಚಂದ್ರಾವತಿ, ಸೌಮ್ಯ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಪ್ರತಿಭಟನೆಯಲ್ಲಿ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಸತ್ಯಜಿತ್ ಸುರತ್ಕಲ್, ಉಮಾನಾಥ್ ಕೋಟ್ಯಾನ್, ಜಗದೀಶ್ ಶೇಣವ, ಶರಣ್ ಪಂಪ್ವೆಲ್, ವಿಜಜಯಗೌಡ, ಪ್ರವೀಣ್ ಕುತ್ತಾರ್, ತೇಜಸ್ವಿನಿ ಗೌಡ ಮುಂತಾದವರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಪೊಲೀಸರ ನಿರ್ಲಕ್ಷ್ಯಕ್ಕೆ ವಜ್ರದೇಹಿ ಕೆಂಡ:
ಪೊಲೀಸರ ನಿರ್ಲಕ್ಷಕ್ಕೆ ಕೆರಳಿ ಕೆಂಡವಾಗಿದ್ದ ವಜ್ರದೇಹಿ ಸ್ವಾಮೀಜಿ, ಉಳಾಯಿಬೆಟ್ಟುವಿನ್ನಲಿ ಹಲ್ಲೆ ನಡೆದಾಗ ಇರದ ಪೊಲೀಸರು ಇಂದು ನಡೆಯುವ ಪ್ರತಿಭಟನೆಗೆ ಆಗಮಿಸಿದ್ದಲ್ಲದೆ, 144 ಸೆಕ್ಷನ್ ಜಡಿದಿದ್ದಾರೆ. ಮೊನ್ನೆ ಹಲ್ಲೆ ನಡೆದಾಗ ಪೊಲೀಸರು ಯಾಕೆ ಸೆಕ್ಷನ್ ಜಡಿದಿಲ್ಲ? ಮೊನ್ನೆ ಒಬ್ಬ ಪೊಲೀಸ್ ಗಲಾಟೆ ನಡೆದಾಗ ಪಿಸ್ತೂಲ್ ಬಿಟ್ಟು ಬಂದಿದ್ದ? ಇದೆಲ್ಲಾ ಪೊಲೀಸರ ನಿರ್ಲಕ್ಷ್ಯದ ಪರಮಾವಧಿ. ಉಳಾಯಿಬೆಟ್ಟುವಿನಲ್ಲಿ ನಮ್ಮವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಅಸಲಿ ಆರೋಪಿಗಳನ್ನು ಬಂಧಿಸಿದೆ ಯಾರನ್ನೋ ಬಂಧಿಸಿದ್ದಾರೆ. ಉಳಾಯಿಬೆಟ್ಟು ತಾಲೂಕು ಪಂಚಾಯತ್ ಸದಸ್ಯನಾದ ಯೂಸಫ್ ಮನೆಯಲ್ಲಿ ಆರೋಪಿಗಳು ಆರಾಮವಾಗಿದ್ದಾರೆ. ಅವರೆಲ್ಲಾ ಬಂಡಾರಿಗುಡ್ಡೆ ಯೂಸಫ್ನ ಮನೆಯಲ್ಲಿದ್ದಾರೆ. ಈಗ ಆತ ಎಲ್ಲಿದ್ದಾನೆ. ಮೊದಲು ಆತನನ್ನು ಬಂಧಿಸಿ ಎಂದು ನೇರವಗಿ ಸವಲು ಹಾಕಿದ್ದರು.
ಸದ್ಯದ ಪರಿಸ್ಥಿತಿ ಶಾಂತಗೊಂಡಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮುಂಜಾಗೃತಾ ಕ್ರಮವಾಗಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

















