ಸಿದ್ದರಾಮಯ್ಯ ‘ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ’ ಬಿ.ವೈ.ವಿಜಯೇಂದ್ರ ವ್ಯಂಗ್ಯ
ಬಂಟ್ವಾಳ: ಸಿಎಂ ಸಿದ್ದರಾಮಯ್ಯ ಅವರು ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕರಾದ ಆರ್.ಅಶೋಕರವರು ಹೇಳಿದ್ದಾರೆ.ಆದರೆ ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು’ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಅವಿಭಜಿತ ದ.ಕ.ಜಿಲ್ಲೆಯಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಉಪಚುನಾವಣೆಯ ಹಿನ್ನಲೆಯಲ್ಲಿ ಮಂಗಳವಾರ ಬಂಟವಾಳದ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರು ಪ್ರಾಮಾಣಿಕ ಮುಖ್ಯಮಂತ್ರಿ ಎಂಬ ಪ್ರಮಾಣಪತ್ರ ಕೊಡುತ್ತಿದ್ದೆನೆ. ಬಿಜೆಪಿ ರಾಜ್ಯಾಧ್ಯಕ್ಷರಿಗೇನಾದರೂ ತಲೆ ಕೆಟ್ಟಿದೆಯಾ ಎಂದು ನೀವು ಅನಿಸಿಕೊಳ್ಳಬಹುದು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ
ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ನಾವು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದೆವು. ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಸಿದ್ದರಾಮಯ್ಯ ಮೊದಲು ಹೇಳಿದರು. ವಾಲ್ಮೀಕಿ ನಿಗಮದಲ್ಲಿ 187 ಕೋ.ರೂ. ಅಲ್ಲ 87 ಕೋಟಿ ರೂ.ಹಗರಣ ನಡೆದಿದೆಯೆಂದು ಮುಖ್ಯಮಂತ್ರಿಯವರು ನಮ್ಮ ಹೋರಾಟದ ಬಳಿಕ ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರು ಪ್ರಾಮಾಣಿಕರು ಎಂದು ವಿಜಯೇಂದ್ರ ಎಂದರು.
‘ಮುಡಾ ಹಗರಣ ನಡೆದೇ ಇಲ್ಲ. ತಮ್ಮ ಕುಟುಂಬವು ನ್ಯಾಯಬದ್ದವಾಗಿಯೇ14 ನಿವೇಶನ ಪಡೆದಿದೆ. 62 ಕೋಟಿ ಪರಿಹಾರ ಕೊಟ್ಟರೆ ಎಲ್ಲ ನಿವೇಶನ ವಾಪಾಸ್ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಯಾವಾಗ ಬಿಜೆಪಿ,ಜೆಡಿಎಸ್ ಒಟ್ಟಾಗಿ ಪಾದಯಾತ್ರೆ ಮಾಡಿದೆವೋ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಮಾಣಿಕವಾಗಿಯೇ 14 ನಿವೇಶನಗಳನ್ನೂ ಹಿಂತಿರುಗಿಸಿದ್ದಾರೆ. ಅದಕ್ಕೆ ಪರಿಹಾರವೂ ಬೇಡ ಎಂದಿದ್ದಾರೆ. ಇದಕ್ಕಿಂತ ಪ್ರಾಮಾಣಿಕ ಮುಖ್ಯಮಂತ್ರಿ ಸಿಗಲು ಸಾಧ್ಯವೇ’ ಎಂದುಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದರು. ಬಿಜೆಪಿ ಭ್ರಷ್ಟಾಚಾರಿಗಳ ಪಕ್ಷ ಎಂದು ಟೀಕಿಸಿದ್ದರು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅದ ಬಳಿಕ ಆಹಿಂದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಾರೆ.ಈ ರೀತಿ ನಡೆದುಕೊಳ್ಳಲು ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕಿತ್ತು ಎಂದು ಟೀಕಾಪ್ರಹಾರಗೈದರು.
ದ.ಕ.ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ದ.ಕ.,ಉಡುಪಿ ಜಿಲ್ಲೆ ಅಂದರೆ ಅಲರ್ಜಿ,ಈ ಜಿಲ್ಲೆಯ ಅಭಿವೃದ್ಧಿಗಾಗಿ ಸರಕಾರ ಚಿಕ್ಕಾಸು ಕೊಡುತ್ತಿಲ್ಲ,ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಟ್ಟಾರೆ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದ ಅವರು ಬಿಜೆಪಿ ಸರಕಾರವಿದ್ದಾಗ ಮಾತ್ರ ಗ್ರಾ.ಪಂ.ಗಳಿಗೆ ಶಕ್ತಿ ಕೊಟ್ಟಿದ್ದಲ್ಲದೆ ಸದಸ್ಯರಿಗೂ ಗೌರವ ತರುವಂತ ರೀತಿಯಲ್ಲಿ ಕೆಲಸ ಮಾಡಿದೆ.ಈಉಪಚುನಾವಣೆ ಯಲ್ಲಿ ಪಕ್ಷದ ಯುವ ನಾಯಕ ಕಿಶೋರ್ ಕುಮಾರ್ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ದುಷ್ಟ ಸರಕಾರಕ್ಕೆ ತಕ್ಕ ಪಾಠಕಲಿಸಬೇಕು ಎಂದುಕರೆ ನೀಡಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಪಕ್ಷದ ಕೋರ್ ಕಮಿಟಿ ಸಾಮಾನ್ಯ ಕಾರ್ಯಕರ್ತ ಕಿಶೋರ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಮಾಜಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮೊದಲಿಗೆ ಹೆಮ್ಮೆ ವ್ಯಕ್ತಪಡಿಸಿದ್ದರು.ಕಾರ್ಯಕರ್ತರ ಪರಿಶ್ರಮದಿಂದ
ಕಿಶೋರ್ ಕುಮಾರ್ ನಿಶ್ಚಿತವಾಗಿ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ಪಕ್ಷದ ರಾಜ್ಯ ಸಹಪ್ರಭಾರಿ
ಡಾ. ಸುಧಾಕರ ರಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಮೂಡಾ,ವಾಲ್ಮೀಕಿ ಸಹಿತ ಹಲವಾರು ಹಗರಣದಲ್ಲಿ ಸಿಲುಕಿರುವ ಲೂಟಿ ಸರಕಾರ ಆಡಳಿತದಲ್ಲಿದ್ದು, ಸಿದ್ದರಾಮಯ್ಯ ಸರಕಾರ ಎಲ್ಲಾ ರಂಗದಲ್ಲು ಸಂಪೂರ್ಣ ವಿಫಲವಾಗಿದೆ.ಇವರಿಗೆ ಬಿಜೆಪಿಯನ್ನು ಟೀಕಿಸುವ ನೈತಿಕತೆಯೇ ಇಲ್ಲ,ಇಂತಹ ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಹಿಂದೂ ವಿರೋಧಿಯಾಗಿರುವ ಸಿದ್ದರಾಮಯ್ಯ ಅವರು ಈಗ ತಾವೇ ಹಣೆಗೆ ಕುಂಕುಮ ಇಡಲು,ಪತ್ನಿ ಹೆಸರಿನಲ್ಲಿ ಅರ್ಚನೆ ಮಾಡಿಸಲು ಶುರು ಮಾಡಿದ್ದಾರೆ. ಅಂದರೆ ಅವರಿಗೆ ಕೇಡುಗಾಲ ಬಂದಿದೆ ಎಂದೇ ಅರ್ಥ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಆರೇಳು ತಿಂಗಳುಗಳಲ್ಲೇ ಸರ್ಕಾರ ಪತನವಾಗಲಿದೆ ಎಂದರಲ್ಲದೆ ಸರಕಾರ ಪಾಪರ್ ಆಗಿದ್ದು, ಅಭಿವೃದ್ಧಿಕಾರ್ಯಗಳಿಗೆ ಹಣವೇ ಇಲ್ಲ,ಈ ಸರಕಾರ ತೊಲಗಿದರಷ್ಠೆ ಗ್ರಾ.ಪಂ.ಗೆ ಅನುದಾನ ಸಿಗಲು ಸಾಧ್ಯಎಂದರು
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ‘ಕದ್ದು ಸಿಕ್ಕಿ ಬಿದ್ದವರು ಕದ್ದ ಮಾಲು ವಾಪಾಸ್ ಕೊಟ್ಟರೆ ಅವರು ಅಪರಾಧಿಗಳಲ್ಲ ಎಂಬ ಕಾನೂನು ರಾಜ್ಯದಲ್ಲಿ ಜಾರಿಯಾಗಿದೆಯೇ. ಇದನ್ನು ಒಪ್ಪಲು ಸಾಧ್ಯವಿದೆಯೇ. ಇಂತಹ ಕಾನೂನು ಈ ದೇಶದಲ್ಲಿ ನಡೆಯಲ್ಲ’ ಎಂದರು.
ಜಗ್ಗಲ್ಲ,ಬಗ್ಗಲ್ಲ,ತಪ್ಪು ಮಾಡಿಲ್ಲ ಎಂದವರು 14 ಸೈಟ್ ವಾಪಾಸ್ ನೀಡಿದ್ದಾರೆ.
‘ತಮ್ಮ ಕುಟುಂಬದ ಟ್ರಸ್ಟ್ ಗೆ ನ್ಯಾಯಯುತವಾಗಿಯೇ ಜಮೀನು ಮಂಜೂರಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ವಾದಿಸಿದ್ದರು. ಈಗ ಜಮೀನು ಮರಳಿಸಿದ್ದಾರೆ. ತಪ್ಪು ಮಾಡಿಲ್ಲವಾದರೆ ಜಮೀನು ಮರಳಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಕಿಶೋರ್ ಕುಮಾರ್ ಮಾತನಾಡಿ,
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಈವರೆಗೆ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕ ನಿರ್ವಹಿಸಿದ್ದೆನೆ, ಪರಿಷತ್ನಲ್ಲಿ ಸ್ಥಳೀಯಾಡಳಿತ ಸಂಸ್ಥೆಯ ಸಮಸ್ಯೆಯ ಬಗ್ಗೆ ಧ್ವನಿಎತ್ತುವುದಾಗಿ ಭರವಸೆ ನೀಡಿದರು
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇವೇಳೆ ನೆಲ್ಯಾಡಿಯ ಪ್ರಭಾವಿ ನಾಯಕ ಕಾಂಗ್ರೆಸ್ ಮುಖಂಡ ಜಯಾನಂದ ಬಂಟ್ರಿಯಾಲ್ ದಂಪತಿ ಬಿಜೆಪಿ ಸೇರ್ಪಡೆಗೊಂಡರು.ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಧ್ವಜನೀಡಿ ಶಾಲುಹಾಕಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶಾಸಕ ವಿ.ಸುನಿಲ್ ಕುಮಾರ್, ಜಿಲ್ಲಾ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಭಾಗಿರಥಿ ಮುರುಳ್ಯ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜೆಡಿಎಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಾಕೆ ಮಾಧವ ಗೌಡ,
ಮಂಗಳೂರು ಮೇಯರ್ ಮನೋಜ್ ಕುಮಾರ್, ಉಪಮೆಯರ್ ಭಾನುಮತಿ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಚುನಾವಣಾ ಸಂಚಾಲಕ ಪ್ರಭಾಕರ ಪ್ರಭು,ಪ್ರ.ಕಾರ್ಯದರ್ಶಿಗಳಾದ ಸುದರ್ಶನ್ ಬಜ,ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಸ್ತಾವನೆಗೈದು ತಳಸಮುದಾಯದ ಸಂಘ ಮತ್ತು ಬಿಜೆಪಿ ಕುಟುಂಬದ ಒರ್ವ ಸಾಮಾನ್ಯ ಕಾರ್ಯಕರ್ತ ಕಿಶೋರ್ ಅವರನ್ನು ಪಕ್ಷ ಗುರುತಿಸಿ ಅಭ್ಯರ್ಥಿಯನ್ನಾಗಿಸಿರುವುದು ಅತ್ಯಂತ ಹೆಮ್ಮೆ ತಂದಿದೆ ಎಂದರು. ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾ.ಪಂ.ಸದಸ್ಯರಿಗೆ ಗೌರವಧನ ಹೆಚ್ಚಿಸುವ ಕೆಲಸ ಮಾಡಿದ್ದರು.ಅಭ್ಯರ್ಥಿ ಕಿಶೋರ್ ಅವರು ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳ ಧ್ವನಿಯಾಗಿ ವಿಧಾನಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದು,ಅವರನ್ನುಬಹುಮತದಿಂ ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿ ದ. ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಚುನಾವಣಾ ಜಿಲ್ಲಾ ಸಂಚಾಲಕ ಕ್ಯಾ.ಗಣೇಶ ಕಾರ್ಣಿಕ್ ವಂದಿಸಿದರು. ಜಿಲ್ಲಾ ಸಂಪರ್ಕ ಪ್ರಮುಖ್ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.