ಬಂಟ್ವಾಳ: ಜಾತ್ಯಾತೀತ ನೆಲೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿದ ಆಲ್ ಕಾರ್ಗೋ ಸಂಸ್ಥೆ, ಬಂಟ್ವಾಳದ ಬಂಟರ ಸಂಘ
ಬಂಟ್ವಾಳ: ಯಾವುದು ಜಾತಿ ಭೇದವಿಲ್ಲ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು ಎನ್ನುವ ನಲೆಗಟ್ಟಿನಲ್ಲಿ ದಕ್ಷಿಣ ಕನ್ನಡ ಅನೇಕ ಸಂಘ ಸಂಸ್ಥೆಗಳು ಕೆಲಸವನ್ನು ಮಾಡಿದೆ. ಇದೀಗ ಇದಕ್ಕೆ ಸಾಕ್ಷಿಯಾಗಿ ಆಲ್ ಕಾರ್ಗೋ ಸಂಸ್ಥೆ ಮತ್ತು ಬಂಟ್ವಾಳದ ಬಂಟರ ಸಂಘ ಈ ಕಾರ್ಯವನ್ನು ಮಾಡಿದೆ. ಜಾತ್ಯಾತೀತ ನೆಲೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿ, ಯಾವುದೇ ಜಾತಿ ಭೇದವನ್ನು ಮಾಡದೇ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದೆ.
ಈ ಬಗ್ಗೆ ಮಾತನಾಡಿದ ಬೆಂಗಳೂರು ಯುನಿವರ್ಸಲ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ನ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಜಾತ್ಯಾತೀತ ನೆಲೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸುವ ಮೂಲಕ ಆಲ್ ಕಾರ್ಗೋ ಸಂಸ್ಥೆ ಮತ್ತು ಬಂಟ್ವಾಳದ ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಬ್ರಹ್ಮರ ಕೂಟ್ಲುವಿನ ಬಂಟರ ಭವನದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಬಂಟರ ಸಂಘ ಬಂಟವಾಳ ತಾಲೂಕು (ರಿ.)ಇದರ ವತಿಯಿಂದ ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಇವರ ನೆರವಿನಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಯೋಚನಾ ಲಹರಿಗಳೂ ಸಕಾರಾತ್ಮಕವಾಗಿ ಬದಲಾಗಬೇಕು. ಆಕಾಶವೇ ಅವಕಾಶ ಎಂಬ ಯೋಚನಾ ಶಕ್ತಿಯನ್ನು ಬೆಳೆಸಿಕೊಂಡು ಮುನ್ನಡೆದಾಗ ಸಾಧನೆ ಸುಲಭ ಸಾಧ್ಯ. ನಿರಂತರ ಶ್ರಮ ಶ್ರದ್ಧೆ, ಶಿಕ್ಷಣ ನಮ್ಮನ್ನು ಕಾಪಾಡುತ್ತದೆ, ಆದರೆ ಕರುಣೆ ಮತ್ತು ವಿಶ್ವಾಸ ನಮ್ಮ ಜೊತೆಯಾಗಿರಬೇಕು ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿ, ಪ್ರಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ನ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಡಾ| ನೀಲ್ರತನ್ ಶಿಂಧೆ ಕೂಡ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಹಲವು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.