ಸುದ್ದಿ9ಕೈಕಂಬ: ಪೊಳಲಿಗೂ ಶಬರಿಮಲೆಗೂ ಒಂದು ಅವಿನಾಭಾವ ಸಂಬಂಧವಿದೆ. ಶಬರಿಮಲೆಯ ಆಡಳಿತ ಮಂಡಳಿಯಲ್ಲಿ ತಾವು ಮಂಗಳಾಪುರ(ಮಂಗಳೂರು)-ಪೊಳಲಿಯಿಂದ ಬಂದಿದ್ದೇವೆ ಎಂದರೆ ವಿಶೇಷ ರಾಜ ಮರ್ಯಾದೆ. ಕೇರಳದ ಯಾವುದೇ ದೇವಸ್ಥಾನದಲ್ಲೂ ಪೊಳಲಿಯ ಬಗ್ಗೆ ಮಾತಾಡಿದರೆ ವಿಶೇಷ ಮರ್ಯಾದೆ ಸಿಗುತ್ತದೆ ಎಂಬುದು ಹಲವಾರು ಅಯ್ಯಪ್ಪ ವೃತಧಾರಿಗಳ ಹೇಳಿಕೆಯಾಗಿದೆ.
ಕಳೆದ ಹಲವಾರು ದಶಕಗಳಿಂದ ಹಠಸಾಧನೆಯ ಮೂಲಕ ಪೊಳಲಿಯಿಂದ ನೇರವಾಗಿ ಶಬರಿಮಲೆಗೆ ಪಾದಯಾತ್ರೆಯ ಮೂಲಕ ಸಾಗುವ ಅಯ್ಯಪ್ಪವೃತಧಾರಿಗಳ ಗುಂಪೊಂದು ಪೊಳಲಿಯಲ್ಲಿ ಸಿಗುತ್ತದೆ. ಸುಮಾರು 650 ರಿಂದ 700 ಕಿ.ಮೀ.ಗಿಂತಲೂ ಅಧಿಕ ದೂರ ಸಾಗುವ ಈ ತಂಡ 23 ದಿನಗಳೊಳಗಾಗಿ ಶಬರಿಮಲೆಗೆ ತಲುಪುತ್ತದೆ.(ಮಂಗಳೂರಿನಿಂದ ಶಬರಿಮಲೆಗೆ ಇರುವ ದೂರ 700 ಕಿ.ಮೀ)
ಕಳೆದ ಹನ್ನೊಂದು ವರ್ಸ ಗಳಿಂದ ಪಾದಯಾತ್ರೆಯ ಮೂಲಕವೇ ಶಬರಿಮಲೆಗೆ ತೆರಳುವ ಈ ತಂಡದ ಯಶೋಗಾತೆ ನಿಜವಾಗಿಯೂ ಅಚ್ಚರಿ, ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗುವಂತಹಾ ವಿಚಾರ. ಆದರೆ ಇದೆಲ್ಲಾ ಯಾವುದೂ ಬೇಡ ಬರೀ ಅಯ್ಯಪ್ಪನ ಕೃಪೆಯೊಂದಿದ್ದರೆ ಸಾಕು ಎಂದಷ್ಟೇ ಹೇಳುವ ಈ ತಂಡದ ಸದಸ್ಯರು ಇನ್ನಷ್ಟು ಅಚ್ಚರಿಗೆ ಕಾರಣರಾಗುತ್ತಾರೆ.
ಹನ್ನೆರಡು ಸದಸ್ಯರಿರುವ ಈ ತಂಡದಲ್ಲಿ ಶೆಟ್ಟಿ ಹರೀಶ್ ಗುರುಸ್ವಾಮಿಯಾಗಿದ್ದಾರೆ ಇವರೊಟ್ಟಿಗೆ ದೇವಪ್ಪ ಗುರುಸ್ವಾಮಿ ಬೇಬಿ ಗುರುಸ್ವಾಮಿ, ಇದ್ದಾರೆ.
ಪೊಳಲಿ ದೇಗುಲದಿಂದ ಹೊರಟ ಅಯ್ಯಪ್ಪ ಭಕ್ತರು.
ಡಿ.4ರಿಂದ ಪಯಣ ಆರಂಭ:
ಇರ್ ಮುಡಿಗೆ ಕರ್ಪೂರದಾರತಿ ಮಾಡಿ ಇರ್ ಮುಡಿ ತಲೆಗೇರಿಸಿ ಹೊರಟುನಿಂತ ಸ್ವಾಮಿಗಳು.
ಮಂಗಳೂರಿನಿಂದ ಕೇರಳ ರಾಜ್ಯದ ಶಬರಿಮಲೆಗೆ ಹೋಗುವ ನಕ್ಲೆ
ತುಪ್ಪಾಭಿಷೇಕದಲ್ಲಿ ಅಯ್ಯಪ್ಪ ದರ್ಶನ.

ಪೊಳಲಿ ದೇಗುಲದಲ್ಲಿ ಇರುಮುಡಿ ಕಟ್ಟಿ, ಅಲ್ಲಿಂದ ಪಯಣ ಆರಂಭವಾಗುತ್ತದೆ. ತಲೆಯಲ್ಲಿಯೇ ಇರುಮುಡಿ ಹೊತ್ತುಸಾಗುವ ತಂಡದವರು ಶರಣು ಕರೆಯುತ್ತಾ ಸಾಗುತ್ತಾರೆ. ಅಲ್ಲಿಂದ ರಾತ್ರಿ 8 ಗಂಟೆ ತನಕ ಪ್ರಯಾಣ ನಡೆಯುತ್ತದೆ. ಯಾವುದಾದರೂ ಪ್ರದೇಶದಲ್ಲಿ ರಾತ್ರಿ ಹೊತ್ತು ತಂಗಿದ ನಂತರ ಬೆಳಿಗ್ಗೆ ಮೂರು ಗಂಟೆಯಿಂದ ಸ್ವಾಮಿಗಳು ಎದ್ದು . ಅಲ್ಲಿಂದ ಬೆಳಿಗ್ಗೆ ನಾಲ್ಕುಗಂಟೆಗೆ ಶರಣು ಕರೆದ ಬಳಿಕ ಮತ್ತೆ ಪಾದಯಾತ್ರೆ ಆರಂಭವಾಗುತ್ತದೆ.
ವಿಶ್ರಾಂತಿ ತಾಣಗಳು: ಆರ್ ಎಸ್ ಎಸ್ ಮೇಲುಸ್ತುವಾರಿ
ಪಾದಯಾತ್ರೆಯಿಂದ ಬರುವ ಅಯ್ಯಪ್ಪ ವೃತಧಾರಿಗಳಿಗೆ ಕೇರಳದ ಹಲವಾರು ಹಿಂದೂ ಸಂಘಟನೆಗಳು ವಿಶೇಷವಾಗಿ ಗೌರವಿಸಿ ಉಪಚಾರ ಮಾಡುತ್ತದೆ. ಮುಖ್ಯವಾಗಿ ಆರ್ ಎಸ್ ಎಸ್ ಸಂಘಟನೆ ಇದರ ಮೇಲುಸ್ತುವಾರಿ ವಹಿಸಿಸುತ್ತದೆ. ತಂಗುದಾಣದಲ್ಲಿ ಬೀಡುಬಿಟ್ಟಿರುವ ಸಂಘಟನೆಯ ಯುವಕರು ವೃತಧಾರಿಗಳನ್ನು ಸ್ವಾಗತಿಸಿ ಅವರಿಗೆ ಊಟೋಪಚಾರ, ಸೀಯಾಳ ನೀಡಿ ಆದರಿಸುತ್ತದೆ. ಸಾಗುವ ಪ್ರದೇಶದಲ್ಲಿ ಸಿಗುವ ದೇವಸ್ಥಾನಗಳೇ ವೃತಧಾರಿಗಳ ಆಶ್ರಯ ತಾಣಗಳು. ಪ್ರತೀದಿನ 25 ಕಿ.ಮೀ.ಗಿಂತಲೂ ಹೆಚ್ಚು ಪಾದಯಾತ್ರೆ ನಡೆಸುವ ವೃತಧಾರಿಗಳ ಕಠಿಣ ಸಾಧನೆ ಎಲ್ಲರಿಗೂ ಅಚ್ಚರಿಯನ್ನು ನೀಡುತ್ತದೆ. ವಿಚಿತ್ರವೆಂದರೆ 21 ದಿನಗಳ ಅವಧಿಯಲ್ಲಿ ಅನ್ನಾಹಾರಕ್ಕೆ ಕೇರಳದ ಕೆಲವು ಸಂಘಟನೆಯೇ ಸಹಾಯ ಮಾಡುತ್ತದೆ. ರಾತ್ರಿಯ ವೇಳೆ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಪೊಳಲಿಯಿಂದ ಬಂದವರೆಂದು ತಿಳಿದರೆ ಊಟ ಮುಗಿದಿದ್ದರೂ ಕೂಡಾ ಮತ್ತೆ ಊಟ ಸಿದ್ಧಪಡಿಸಿ ಬಳಸುವ ಕ್ರಮ ಇದೆ ಎಂದು ವೃತಧಾರಿಗಳ ಅಭಿಪ್ರಾಯ.
ಕಳೆದ ಹನ್ನೊಂದು ವರ್ಷಗಳಿಂದ ಎಡೆಬಿಡದೆ ಪಾದಯಾತ್ರೆಯ ಮೂಲಕವೇ ಶಬರಿಮಲೆಗೆ ಹೋಗುವ ತಂಡದ ಗುರುಸ್ವಾಮಿ ಹರೀಶ್ ಶೆಟ್ಟಿ ಯೊಂದಿಗೆ ದೇವಪ್ಪ ಗುರು ಸ್ವಾಮಿ, ಬೇಬಿಗುರುಸ್ವಾಮಿ , ಮಟ್ಟಿ ಹರಿಶ್ಷಂದ್ರ,ಸತೀಶ್ ,ರಂಜಿತ್, ವಿನೋದ್, ಮನೋಜ್, ಲಕ್ಷ್ಮಣ ಕಲ್ಕುಟ, ನಂದಕಿಶೋರ್, ಸಂತೋಷ್, ದಯಾನಂದ ಈ ಎಲ್ಲಾ ವೃತಧಾರಿಗಳು ಶಬರಿಮಲೆಗೆ ಪಾದಯಾತ್ರೆಯಲ್ಲಿ ಡಿ4ರಂದು ಗುರುವಾರ ಪೋಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಸಾಯಂಕಾಲ 5ಗಂಟೆಗೆ ಹೊರಟು ರಾತ್ರಿ ಕುಡುಪು ಅನಂತಪದ್ಮನಾಭನ ಸನ್ನಿಧಿಯಲ್ಲಿ ತಂಗುವರು.
ಸುಮಾರು ಹತ್ತು ವರ್ಷಗಳ ಮುಂಚೆಗೂ ಇಂದಿಗೂ ಸುಮಾರು ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ. ಈಗಿನ ಕೊಂಚ ಬದಲಾವಣೆಗಳನ್ನು ಬಿಟ್ಟರೆ ಎಲ್ಲವೂ ಅಂದಿನಂತೆಯೇ ಇದೆ. ಅದೇ ಕಾಡುಪ್ರದೇಶ, ಆಗೊಮ್ಮೆ ಈಗೊಮ್ಮೆ ಧುತ್ತೆಂದು ಎದುರಾಗುವ ಕಾಡುಪ್ರಾಣಿಗಳು ಒಂದು ಸಲ ಭಯವನ್ನುಂಟುಮಾಡಿದರೂ ಅಯ್ಯಪ್ಪ ದೇವರು ಕಾಪಾಡಿಕೊಂಡು ಬರುತ್ತಿದ್ದಾರೆ ಎಂಬ ನಂಬಿಕೆ ಹರೀಶ್ ಅವರದ್ದು.
ಕಲ್ಲುಮುಳ್ಳುಗಳ ಹಾದಿ:
`ಕಲ್ಲುಂಮುಳ್ಳುಂ ಕಾಲಿಗೆ ಮೆಟ್ಟ್… ‘ಎಂಬ ಸಾಲಿನಂತೆ ಪಾದಯಾತ್ರೆಯಲ್ಲಿ ಸಾಗುವ ಭಕ್ತರಿಗೆ ಕಲ್ಲುಮುಳ್ಳುಗಳ ಕಠಿಣ ಹಾದಿ ಇರುತ್ತದೆ. ಕೇರಳದ್ದು ನಿತ್ಯಹರಿದ್ವರ್ಣದ ಕಾಡುಗಳು ಹಾಗೂ ಪೊದೆ ಸಸ್ಯಗಳಿಂದ ಕೂಡಿರುವ ಪ್ರದೇಶವಾಗಿರುವುದರಿಂದ ಚೂಪಾದ ಮುಳ್ಳುಗಳು ಆಗೊಮ್ಮೆ ಈಗೊಮ್ಮೆ ಕಚ್ಚುವುದು ಸಾಮಾನ್ಯ. ಬರೀ ಕಾಲಿನಲ್ಲಿ ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ತಪ್ಪಿದ್ದಲ್ಲ.
ಅಲ್ಲದೆ ತಲೆಯಲ್ಲಿ ಇರುಮುಡಿಯ ಭಾರ, ಅದರ ಜೊತೆಗೆ ತನ್ನ ಬಟ್ಟೆಬರೆಗಳು ಇತ್ಯಾದಿಗಳನ್ನು ಹೊತ್ತುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇರುಮುಡಿ ತಲೆಯಲ್ಲೇ ಬಹಳ ಸಮಯದವರೆಗೆ ಇರುವುದರಿಂದ ತಲೆಯಲ್ಲಿ ನೋವು ಕಾಣಿಸುತ್ತದೆ, ಕಾಲು ನೋವಾಗುತ್ತದೆ, ಆದರೆ ಎಲ್ಲರೂ ಭಕ್ತಿಯ ಸ್ಥಿತಿಯಲ್ಲಿರುವುವದರಿಂದ ಯಾವುದೂ ಅರಿವಿಗೆ ಬರುವುದಿಲ್ಲ ಎಂಬುದು ವೃತಧಾರಿಗಳ ಅಭಿಪ್ರಾಯವಾಗಿದೆ.
ಪೊಳಲಿಯಿಂದ ಗುರುವಾಯೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ತಂಡ ಅಲ್ಲಿಂದ ನೇರವಾಗಿ ಪೊನ್ನಾಣಿಗೆ ತಲುಪುತ್ತದೆ. ಅಲ್ಲಿಂದ ಶಬರಿಮಲೆ ಸನ್ನಿಧಾನಕ್ಕೆ 75 ಕಿ.ಮೀ. ಒಳದಾರಿಯಲ್ಲಿ ಸಾಗಿ ಅಲ್ಲಿಂದ ಎರಿಮಲೆ ಅಥವಾ ಪಂಪಾ ಕ್ಷೇತ್ರಕ್ಕೆ ತಲುಪಿದ ನಂತರ ಅಲ್ಲಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳುತ್ತದೆ.
ಕಾಶಿಯಿಂದಲೂ ಪಾದಯಾತ್ರೆ : ಶೆಟ್ಟಿ ಹರೀಶ್ ಸ್ವಾಮಿ:
ಕಳೆದ 2012 ರ ನವೆಂಬರ್ ನಲ್ಲಿ ಅಯ್ಯಪ್ಪ ವೃತಧಾರಿಗಳ ಪೈಕಿ ಶೆಟ್ಟಿ ಹರೀಶ ಹಾಗೂ ಅಶೋಕ್ ಮೂಡಬೆದ್ರೆಯವರು ಆರು ಮಂದಿಯೊಂದಿಯ ತಂಡದೊಂದಿಗೆ ಉತ್ತರಪ್ರದೇಶದ ವಾರಣಾಸಿಯ ಗಂಗಾ ನದಿ ತಟಪ್ರದೇಶವಾದ ಕಾಶಿಯಿಂದ ಈ ತಂಡವು ಅಯ್ಯಪ್ಪ ವೃತಧಾರಿಗಳಾಗಿ ಕಾಲ್ನಡಿಗೆಯಲ್ಲಿ ಕಾಶಿಯಿಂದ ಶಬರಿಮಲೆಗೆ 2500 ಕಿ.ಮೀ. ಅಧಿಕ ದೂರವಿರುವ. ಸುಮಾರು ಎರಡು ತಿಂಗಳ ಮುಂಚೆಯೇ ಯಾತ್ರೆ ಆರಂಭಿಸಿ ಶಬರಿಮಲೆಯ ಸನ್ನಿಧಾನಕ್ಕೆ ತೆರಳಿದ ಅಯ್ಯಪ್ಪ ಭಕ್ತರಿವರು . ಈ ತಂಡ ಪೊಳಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಿಂದ ಹೊರಡುವುದು ರೂಢಿಯಾಗಿದೆ.
ಸುಮಾರು 70ವರ್ಷದ ಇಂದಿನಿಂದಲೂ ಪೊಳಲಿಯಿಂದ ಶಬರಿಮಲೆಗೆ ಯಾತ್ರೆ ಮಾಡುವವರಿದ್ದರು ಆ ಸಮಯದಲ್ಲಿ ರಸ್ತೆ ದಾರಿಗಳಿಲ್ಲದ ಸಮಯದಲ್ಲಿ ಕಾಡಿನಲ್ಲಿ ದಾರಿ ಮಾಡಿಕೊಂಡು ಶಬರಿಮಲೆಗೆ ಹೋಗುತ್ತಿದ್ದ ಸ್ವಾಮಿಗಳಲ್ಲಿ ಮೊದಲಿಗರಾಗಿ ಕಡ್ಲೆ ರಾಮ ಸ್ವಾಮಿ ಪೊಳಲಿಯವರಾದ ದೂಮ ಗುರುಸ್ವಾಮಿ, ರಾಮ ಗುರುಸ್ವಾಮಿ , ಸೋಂಪ ಗುರುಸ್ವಾಮಿ ಈಗೆ ಇವರ ಹಲವಾರು ಶಿಷ್ಯಂದಿರಾಗಿ ಗುರು ಸ್ವಾಮಿಗಳಾಗಿ ಪೊಳಲಿಯಿಂದ ಸಾವಿರಾರು ಅಯ್ಯಪ್ಪ ಭಕ್ತರನ್ನು ಮಾಲೆ ಹಾಕಿ ನವೆಂಬರ್ ತಿಂಗಳಿನಿಂದ ಜನವರಿ ಮಕರ ಸಕ್ರಾಂತಿಯ ವರೆಗೆ ವ್ರತ ನಿಯಮಗಳನ್ನು ಪಾಲಿಸಿ ಅಯ್ಯಪ್ಪ ಸ್ವಾಮಿಯ ಪೂಜೆ , ಪಡಿ ಪೂಜೆ, ಅನ್ನಧಾನ ವನ್ನು ಮಾಡಿ ಶಬರಿಮಲೆಗೆ ಯಾತ್ರೆ ಮಾಡಿಸುವುದು ಇಲ್ಲಿಯ ಒಂದು ವಿಶೇಷ.
ಸ್ವಾಮಿ ಯೇ ಶರಣಂ ಅಯ್ಯಪ್ಪ.
-ವಾಮನ್ ಪೂಜಾರಿ ಕೈಕಂಬ





