ಬಂಟ್ವಾಳ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ
ಬಂಟ್ವಾಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ (ಅ.7) ಬೆಂಜನಪದವುನಲ್ಲಿ ನಡೆದಿದೆ. ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಬಡಕಬೈಲಿನ ಖಾಸಗಿ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮನೆಯವರು ಶಂಕಿಸಿದ್ದಾರೆ.
ಬುಧವಾರ (ಆ. 7) ರಾತ್ರಿ ಈ ಘಟನೆ ನಡೆದಿದ್ದು, ಬಾಲಕ ರಾತ್ರಿ ಸುಮಾರು 7.30 ರ ಹೊತ್ತಿಗೆ ಸ್ನಾನ ಮಾಡಲೆಂದು ಬಚ್ಚಲು ಮನೆಗೆ ತೆರಳಿದ್ದಾನೆ. ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಮಗನನ್ನು ಕರೆಯಲೆಂದು ಹೋಗಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ಮಗ ಬಾಗಿಲು ತೆಗೆಯದೆ ಇದ್ದಾಗ ಗಾಬರಿಗೊಂಡು ಬಾಗಿಲನ್ನು ಮುರಿಯಲಾಗಿದೆ. ಆ ಸಂದರ್ಭದಲ್ಲಿ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿದೆ. ಕೂಡಲೇ ಬಾಲಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಪರೀಕ್ಷೆ ನಡೆಸಿದಾಗ ಬಾಲಕ ಮೃತಪಟ್ಟ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.