ಬಂಟ್ವಾಳ: ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ‘ಆಟಿದ ಕೂಟ’
ತುಳುನಾಡಿನ ಕೃಷಿ ಪರಂಪರೆ, ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಬಿಂಬಿಸುವಲ್ಲಿ ಆಟಿದ ಕೂಟ ಕಾರ್ಯಕ್ರಮ ಯುವಜನತೆಗೆ ಪ್ರೇರಣಾದಾಯಕವಾಗಿದೆ ಎಂದು ರೋಟರಿ ವಲಯ ಸೇನಾನಿ ಗಣೇಶ ಶೆಟ್ಟಿ ಆರಂಬೋಡಿ ಹೇಳಿದರು. ಇವರು ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ನಡೆದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹಿತ ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ವಹಿಸಿದ್ದು, ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ನೆರೆದ್ದಿದ್ದವರನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿನಿ ಸಾನಿಧ್ಯರನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿ ಹೆರಾಲ್ಡ್ ಮೊಂತೆರೋ, ಪ್ರಮುಖರಾದ ಎಂ.ಪದ್ಮರಾಜ ಬಲ್ಲಾಳ್, ರಾಘವೇಂದ್ರ ಭಟ್, ಕೆ. ರಮೇಶ ನಾಯಕ್ ರಾಯಿ, ಆಂಟನಿ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು. ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ ವಂದಿಸಿದರು.