ಬಂಟವಾಳ ರೈಲ್ವೇ ನಿಲ್ದಾಣಕ್ಕೆ ಇಲಾಧಿಕಾರಿಗಳ ಹಠಾತ್ ಭೇಟಿ,ಅವ್ಯವಸ್ಥೆಯ ದೂರಿಗೆ ಸ್ಪಂದನೆ
ಬಂಟ್ವಾಳ: ಅಮೃತ ಭಾರತ್ ರೈಲ್ವೇ ಯೋಜನೆಯಡಿ ಬಂಟ್ವಾಳ ರೈಲ್ವೇ ನಿಲ್ದಾಣಕ್ಕೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ದಂಡೇ ಬುಧವಾರ ಸಂಜೆ ಹಠಾತ್ ಭೇಟಿ ನೀಡಿ 28.49 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀನಾರಾಯಣ ಬಂಟ್ಚಾಳ ಅವರು ಸಲ್ಲಿಸಿದ ಅಹವಾಲಿಗೆ ಸ್ಪಂದಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ವಿಶೇಷ ಕೋರಿಕೆಯ ಮೇರೆಗೆ ರಾಜ್ಯ ರೈಲ್ವೆ ಸಚಿವರಾದ ಸೋಮಣ್ಣನವರ ನಿರ್ದೇಶನದಂತೆ ರೈಲ್ವೇ ಇಲಾಖೆಯ ಡಿಆರ್ ಎಂ ಶಿಲ್ಪಾ ಅಗರವಾಲ್, ನೈರುತ್ಯ ರೈಲ್ವೇ ಮೈಸೂರು ವಿಭಾಗದ ಜಿಎಂ ಅರವಿಂದ ಶ್ರಿವಾಸ್ತವ್ ,ಗತಿಶಕ್ತಿ ಸಹಿತ ಅಧಿಕಾರಿಗಳ ತಂಡ ಅಗಮಿಸಿ ಬಂಟವಾಳ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಯ ಗುಣಮಟ್ಟ ಸಹಿತ ಅವ್ಯವಸ್ಥೆಯನ್ನು ಪರಿಶೀಲಿಸಿದರು.

ದೂರುದಾರ ಲಕ್ಷ್ಮೀನಾರಾಯಣರಿಂದ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಇಲ್ಲಿನ ನಾದುಸ್ಥಿತಿಯಲ್ಲಿರುವ ಶೌಚಾಲಯವನ್ನು ಕಂಡು ಗರಂ ಆದರಲ್ಲದೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆಯು ಅಸಮಾಧಾನ ವ್ಯಕ್ತಪಡಿಸಿದರು. ಸದ್ಯಕ್ಕೆ ಮಹಿಳೆಯರಿಗೆ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ ಅಧಿಕಾರಿಗಳು ಕಾಮಗಾರಿಯ ವೇಳೆ ಪ್ರತ್ಯೇಕವಾದ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆಯು ನಿರ್ದೇಶನ ನೀಡಿದರು. ಪ್ಲ್ಯಾಟ್ ಫಾರಂನ ಮೇಲ್ಛಾವಣಿಯನ್ನು ತಂದು 8 ತಿಂಗಳಾದರೂ ಅಳವಡಿಸದಿರುವುದರಿಂದ ಅದು ತಕ್ಕು ಹಿಡಿಯಲಾರಂಭಿಸಿದೆ. ಹಲವು ದಿನಗಳಿಂದ ಇಲ್ಲಿ ರಾಶಿ ಬಿದ್ದಿದ್ದ ಮಣ್ಣನ್ನು ತಾವು ನಿಲ್ದಾಣಕ್ಕೆ ಬರುವ ಮಾಹಿತಿ ತಿಳಿದು ಇದೀಗ ತೆರವು ಮಾಡಿದ್ದಾರೆ. ರಾತ್ರಿವೇಳೆ ಗಾಂಜಾ ಸೇದುವವರು,ಪುಂಡರ ಹಾವಳಿಯ ಬಗ್ಗೆಯು ಲಕ್ಷ್ಮೀನಾರಯಾಣ ಅವರು ಅಧಿಕಾರಿಗಳ ಗಮನಕ್ಕೆ ತಂದರು.
ಅಹವಾಲುಗಳನ್ನು ಅಲಿಸಿದ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆಯು ಸೂಚಿಸಿದರಲ್ಲದೆ ನಿಲ್ದಾಣಕ್ಕಾಗಮಿಸುವ ದಾರಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ರೈಲ್ವೇ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡಿದರು.ಜಿ.ಪಂ.ಮಾಜಿ ಸದಸ್ಯ ರವೀಂದ್ರಕಂಬಳಿ, ಪ್ರಮುಖರಾದ ಪುಪ್ಪರಾಜ ಚೌಟ,ಚರಣ್ ಜುಮಾದಿಗುಡ್ಡೆ, ವಸಂತ ಮಲ್ಯ ಮೊದಲಾದವರಿದ್ದರು.