ಅರ್ಜುನ್ ಭಂಡಾರ್ಕರ್ ಗೆ ‘ಸೇವಾ ತುಡರ್ -2024’ ಪ್ರಶಸ್ತಿ ಪ್ರದಾನ
ಬಂಟ್ವಾಳ: ಸಿದ್ಧಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಹಲವರ ಬಾಳಿಗೆ ಬೆಳಕಾದ ಬಂಟ್ವಾಳದ “ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ” ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಅವರಿಗೆ ‘ಸೇವಾ ತುಡರ್ -2024’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅದೇ ರೀತಿ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತಲ್ಲದೆ 40 ಬಾರಿ ರಕ್ತದಾನಗೈದ ಆಟೋ ಚಾಲಕ ಗಂಗಾಧರ್ ಪೂಜಾರಿ ಕರ್ಪೆ ಅವರನ್ನು ಸನ್ಮಾನಿಸಲಾಯಿತು. ಕೃಷಿಕ ಮೈಕಲ್ ಡಿಕೋಸ್ತರನ್ನು ಅಭಿನಂದಿಸಲಾಯಿತು.

ಇದೇ ವೇಳೆ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ‘ಮಂಥನ’ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ ಸಂಪನ್ನಗೊಂಡಿತುರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್, ಸ್ಮಿತೇಶ್ ಬಾರ್ಯ, ನಾರಾಯಣ ನಾಯಕ್ ಕರ್ಪೆ, ಮಹೇಶ್ ಕರ್ಕೇರ ಕಾರ್ಯಾಗಾರ ನಡೆಸಿಕೊಟ್ಟರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಚೇತನ್ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದ್ದರು. ಸುಮಾರು 179 ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 70 ಮಂದಿ ರಕ್ತದಾನ ಮಾಡಿದರು.ಬಳಿಕ ಗುರುಚೈತನ್ಯ ಸೇವಾಶ್ರಮ ಗುಂಡೂರಿಯ ಆಶ್ರಮಕ್ಕೆ ತೆರಳಿ ಆಶ್ರಮವಾಸಿಗಳಿಗೆ ಊಟ ನೀಡಲಾಯಿತು.

ಹ್ಯುಮ್ಯಾನಿಟಿ ಸಂಸ್ಥಾಪಕ ರೋಷನ್ ಬೆಳ್ಮಣ್, ಸ್ವರ್ಣ ಸಂಜೀವಿನಿ ಸಂಸ್ಥಾಪಕ ಸಚಿನ್ ಸುವರ್ಣ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ, ಟ್ರಸ್ಟ್ ಸದಸ್ಯ ಸುರೇಶ್ ಸುವರ್ಣ, ಅಶ್ವತ್ಥ್ ಅರಳ, ಪ್ರಶಾಂತ್ ಅಳಕೆ, ರಂಜಿತ್ ಶೆಟ್ಟಿ, ಸಂತೋಷ್ ಬಂಗೇರ, ಪ್ರದೀಪ್, ನಿತಿನ್ ಉಪಸ್ಥಿತರಿದ್ದರು. ಟ್ರಸ್ಟ್ ಸಂಸ್ಥಾಪಕ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.