ಬಂಟ್ವಾಳ: ಸಂವಾದ ಯುವ ಮುನ್ನಡೆ ತಂಡದಿಂದ ನೇತ್ರಾವತಿ ನದಿ ಮಾಲಿನ್ಯದ ಕುರಿತು “ನೀರ ದಾರಿಯ ನಡೆ” ಮೂರನೇ ದಿನದ ಪಾದಯಾತ್ರೆಯು ಮಂಗಳವಾರ ಮಂಗಳೂರಿನ ಪಂಪ್ ವೆಲ್ ನಿಂದ ಆರಂಭಗೊಂಡು ಉಳ್ಳಾಲದ ಕಡೆಗೆ ಮುಂದುವರಿಯಿತು.

ಉಳ್ಳಾಲ ಸೇತುವೆಯ ಕೆಳಗಡೆ ನೇತ್ರಾವತಿ ನದಿಯಲ್ಲಿ ಅನೇಕ ಪ್ಲಾಸ್ಟಿಕ್ ಬಾಟಲಿಗಳು ತೇಲುವುದು ಕಂಡು ಬಂದವು. ಉಳ್ಳಾಲ ಸೇತುವೆಯ ಎರಡೂ ಬದಿ ನದಿಗೆ ಕಸ ಎಸೆಯದಂತೆ ಫಲಕಗಳನ್ನು ಕಟ್ಟುತ್ತಾ ಮುಂದುವರೆದ ತಂಡವು ಉಳ್ಳಾಲ ಪೇಟೆಯಲ್ಲಿ ಕರಪತ್ರ ಹಂಚಿತು.

ಸಾರ್ವಜನಿಕರು, ಉಳ್ಳಾಲ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ಪುರಸಭೆಗಳ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉಳ್ಳಾಲ ಅಳಿವೆಯಲ್ಲಿ ಪಾದಯಾತ್ರೆ ಸಂಪನ್ನಗೊಳಿಸಿದ ತಂಡವು ನಂತರ ನೇತ್ರಾವತಿ ನದಿ ಮಾಲಿನ್ಯದ ಪಾದಯಾತ್ರೆ ಅಭಿಯಾನದಲ್ಲಿ ಮೂರು ದಿನಗಳ ಜನರ ಒಡನಾಟದಿಂದ ಕಂಡುಕೊಂಡ ಅಂಶಗಳನ್ನು ಅಪರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
