ಬಂಟ್ವಾಳ: ಕಲ್ಲಡ್ಕ ಮ್ಯೂಸಿಯಂ ವತಿಯಿಂದ ಜಪಾನಿನಲ್ಲಿ ನಡೆಯಲಿರುವ 17 ರ ವಯೋಮಾನದ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳಿಗೆ ಸನ್ಮಾನ ಕಾರ್ಯಕ್ರಮ ಕಲ್ಲಡ್ಕ ಮ್ಯೂಸಿಯಂ ಆವರಣದಲ್ಲಿ ನಡೆಯಿತು.

2023-24 ನೇ ಸಾಲಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಹ್ಯಾಂಡ್ ಬಾಲ್ ಸ್ಪರ್ಧೆಗಳಲ್ಲಿ ವಿಜೇತರಾಗಿ ಇದೀಗ ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಬಂಟ್ವಾಳ ತಾಲೂಕಿನ ಅಮ್ಟೂರು ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಅಝೀಂ ಬಿ., ಮೊಹಮ್ಮದ್ ಮಸ್ಕೂರ್, ಸೃಜನ್, ಲಕ್ಷತ್ ಎಚ್, ಮೊಹಮ್ಮದ್ ಫಾಝ್ ಹಾಗೂ ಇವರಿಗೆ ತರಭೇತು ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉಪನ್ಯಾಸಕ ಹಾಗೂ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ ಯಾವುದೇ ಸಾಧನೆ ಮಾಡಿದ ಸಾಧಕನಿಗೆ ತನ್ನ ಊರಿನಲ್ಲಿ ಸಿಗುವ ಸನ್ಮಾನ ಆತನಿಗೆ ದೊರಕುವ ಬಹು ದೊಡ್ಡ ಪಾರಿತೋಷಕವಾಗಿದೆ, ಪ್ರತಿಯೊಂದು ಮಕ್ಕಳಲ್ಲೂ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರಿಂದ ಆಗಬೇಕಾಗಿದೆ ಎಂದರು.

ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ವಿಶೇಷ ವಸ್ತು ಸಂಗ್ರಹದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮೂರಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಕಲ್ಲಡ್ಕ ಮ್ಯೂಸಿಯಂ ನ ಸಂಸ್ಥಾಪಕ ಹಾಜಿ ಮುಹಮ್ಮದ್ ಯಾಸಿರ್ ಅವರ ಸಾಧನೆಗೆ ಅಭಿನಂದಿಸಿದರು

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ, ಕರಿಂಗಾನ ಚರ್ಚ್ ನ ಧರ್ಮಗುರು ರೆ.ಫಾ. ಕಿರಣ್ ಮ್ಯಾಕ್ಸಿಂ ಪಿಂಟೋ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್,  ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿ ಶುಭ ಹಾರೈಸಿದರು.

ಕಲ್ಲಡ್ಕ ಕೆ.ಟಿ.ಹೋಟೇಲ್ ಮಾಲಕ ರಾಜೇಂದ್ರ ಹೊಳ್ಳ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್, ಹಜಾಜ್ ಸಮೂಹ ಸಂಸ್ಥೆಯ ಇಮ್ತಿಯಾಝ್ ಗೋಳ್ತಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಝಕರಿಯಾ ಕಲ್ಲಡ್ಕ, ಕಲ್ಲಡ್ಕದ ತ್ರಿವರ್ಣ ಸಂಗಮ ಹಾಗೂ ಝಮಾನ್ ಬಾಯ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಪ್ರಸ್ತಾವನೆಗೈದರು. ಕಲ್ಲಡ್ಕ ಮ್ಯೂಸಿಯಂ ಸಂಸ್ಥಾಪಕ ಮೊಹಮ್ಮದ್ ಯಾಸೀರ್ ಕಲ್ಲಡ್ಕ ಸ್ವಾಗತಿಸಿ, ವಂದಿಸಿದರು. ಅಬ್ದುಲ್  ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *