ಮಂಗಳೂರು ವಿಭಾಗದ ಬಾಲಗೋಕುಲ ಬೇಸಿಗೆ ಶಿಬಿರದ ಪ್ರಶಿಕ್ಷಣ ವರ್ಗ
ಮಂಗಳೂರು: ಸೇವಾ ಭಾರತಿ ಕರ್ನಾಟಕ ಮಂಗಳೂರು ವಿಭಾಗದ ವತಿಯಿಂದ ಮಂಗಳೂರು ವಿಭಾಗದ ಬಾಲಗೋಕುಲ-ಬೇಸಿಗೆ ಶಿಬಿರದ ಪ್ರಶಿಕ್ಷಣ ವರ್ಗ ಫೆ.೩ರಂದು ಶನಿವಾರ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಡಿಂಕಿ ಐಸ್ಕ್ರಿಮ್ನ ಮಾಲಕರಾದ ಶ್ರೀಮತಿ ಸ್ವರ್ಣ ಹರಿಣಿ ಮತ್ತು ಸ್ವರ್ಣ ಸುಂದರ್ ಇವರು ಶಿಬಿರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಬಾಲಗೋಕುಲ ಕೈಗೊಳ್ಳುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಗ್ರಾಮ ವಿಕಾಸದ ಪ್ರಾಂತ ಸಂಯೋಜಕ ಬಾಲಕೃಷ್ಣ ಕಿಣಿಯವರು ಪ್ರಸ್ತುತ ಸಮಾಜದ ಮೇಲಿರುವ ಸವಾಲನ್ನು ಎದುರಿಸಲು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದೇ ಉತ್ತಮ ಮಾರ್ಗವೆಂದು ತಿಳಿಸಿದರು.

ಶಿಬಿರದಲ್ಲಿ ಮಂಗಳೂರು ವಿಭಾಗದ ನಾಲ್ಕು ಜಿಲ್ಲೆಯಿಂದ ೨೪೮ ಮಂದಿ ಶಿಕ್ಷಾರ್ಥಿಗಳು ಪಾಲ್ಗೊಂಡು ಮುಂದಿನ ರಜಾ ಕಾಲದ ಬೇಸಿಗೆ ಶಿಬಿರ ಮತ್ತು ಬಾಲಗೋಕುಲದ ಬಗ್ಗೆ ವಿವಿಧ ಅವಧಿಗಳಲ್ಲಿ ಮಾಹಿತಿಯನ್ನು ಪಡೆದರು.
ಶಿಬಿರದಲ್ಲಿ ಬೇಸಿಗೆ ಶಿಬಿರ ಪ್ರಾತ್ಯಕ್ಷಿಕೆ ಮತ್ತು ಯೋಜನೆ, ಅಭಿನಯ ಗೀತೆ, ಆಟ ಮುಂತಾದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಲಾಯಿತು.
ಸುಮಾರು ೫೮ ಸ್ಥಾನಗಳಲ್ಲಿ ರಜಾ ಕಾಲದ ಬೇಸಿಗೆ ಶಿಬಿರವನ್ನು ನಡೆಸುವ ಬಗ್ಗೆ ಯೋಜಿಸಲಾಯಿತು. ಶಿಬಿರಕ್ಕೆ ಬಾಲಗೋಕುಲ ಮತ್ತು ಸಂಸ್ಕಾರ ಕೇಂದ್ರ ನಡೆಸಲು ಆಸಕ್ತಿ ಇರುವ ಗೃಹಿಣಿಯರು, ಕಾಲೇಜು ವಿದ್ಯಾರ್ಥಿನಿಯರು, ಉದ್ಯೋಗಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.
ಸಮಾರೋಪದಲ್ಲಿ ಮಂಗಳೂರು ವಿಭಾಗ ಕಾರ್ಯವಾಹರಾದ ವಾದಿರಾಜ ಮಾತನಾಡುತ್ತಾ ಮನುಷ್ಯನ ಬಾಲ್ಯ ಜೀವನದಲ್ಲಿ ಪಡೆದ ಉತ್ತಮ ಸಂಸ್ಕಾರವು ಅವನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಸಹಕಾರಿ ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಸೇವಾ ಭಾರತಿಯ ಪ್ರಾಂತ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ಹಾಗೂ ವಿಭಾಗ ಬಾಲಗೋಕುಲ ಪ್ರಮುಖ್ ವಸಂತ ಉಪಸ್ಥಿತರಿದ್ದರು.