ಜ.೨೧: ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಸಂಭ್ರಮ ಕಲಾವಳಿ- ೨೦೨೪
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಸಂಭ್ರಮ ಕಲಾವಳಿ – ೨೦೨೪ ಜ.೨೧ರಂದು ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ್ ಹೇಳಿದರು.
ಅವರು ಮಂಗಳವಾರ ಬಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹಿರಿಯ ರಂಗ ನಿರ್ದೇಶಕ ರಮಾ ಬಿ.ಸಿ.ರೋಡು ದೀಪ ಪ್ರಜ್ವಲಿಸಿ ಸಾಂಸ್ಕೃತಿಕ ಸಂಭ್ರಮ ಕಲಾವಳಿಗೆ ಚಾಲನೆ ನೀಡುವರು, ಚಲನ ಚಿತ್ರ ನಟ ಮನೋಜ್ ಪುತ್ತೂರು ಉಪಸ್ಥಿತರಿರುವರು.
ಮಧ್ಯಾಹ್ನ ೧೨ ಗಂಟೆಗೆ ನಡೆಯುವ ಸಭಾ ಕಾರ್ಯಕಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘುಮೂಲ್ಯ, ಪ್ರಮುಖರಾದ ಗಿರೀಶ್ ಬಿ.ಸಾಲ್ಯಾನ್, ಸುನೀಲ್ ಆರ್. ಸಾಲ್ಯಾನ್, ಮಯೂರ್ ಉಳ್ಳಾಲ್, ವಿಠಲ ಕನ್ನಿರ್ ತೋಟ ಭಾಗವಹಿಸುವರು, ಸಂಜೆ ೫ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಂ. ಅಣ್ಣಯ್ಯ ಕುಲಾಲ್, ಪ್ರೇಮಾನಂದ ಕುಲಾಲ್, ಪುರುಷೋತ್ತಮ ಕುಲಾಲ್ ಕಲ್ಬಾವಿ, ದಿನೇಶ್ ಕುಲಾಲ್, ಅನಿಲ್ ದಾಸ್, ಮಮತಾ ಗುಜರನ್, ಸುಧಾಕರ ಎನ್. ಸಾಲ್ಯಾನ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಕಲಾವಳಿ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು, ಅವಿಭಜಿತ ಜಿಲ್ಲೆಯ ನೊಂದಾಯಿತ ಕುಲಾಲ ಸಂಘಗಳು ಪಾಲ್ಗೊಳ್ಳಲಿವೆ. ವಿಜೇತ ತಂಡಗಳಿಗೆ ನಗದು ಸಹಿತ ಟ್ರೋಫಿ ನೀಡಲಾಗುವುದು ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೂ ೫ ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಪೊಸಳ್ಳಿಯಲ್ಲಿ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಈ ಕಾರ್ಯಕ್ರಮದ ಮೂಲಕ ಉಳಿಕೆಯಾಗುವ ಹಣವನ್ನು ಈ ಕಾಮಗಾರಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ ಅವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಕಳೆದ ೪೫ ವರ್ಷಗಳಿಂದ ಸಮುದಾಯದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಬಡಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಬಡ ಜನರಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿದೆ.
ಇದೀಗ ಮೊದಲ ಬಾರಿಗೆ ಅವಿಭಜಿತ ಜಿಲ್ಲೆಯ ಕುಲಾಲ ಬಂಧುಗಳಿಗೆ ಸಾಂಸ್ಕೃತಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸುದ್ದಿ ಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಕೇಶವ ಮಾಸ್ತರ್, ಕೋಶಾಧಿಕಾರಿ ರಮೇಶ್ ಸಾಲ್ಯಾನ್, ಕಾರ್ಯಕ್ರಮದ ಪ್ರಧಾನ ಸಂಚಾಲಕ ದಾಮೋದರ್ ಏರ್ಯ, ಜೊತೆ ಕಾರ್ಯದರ್ಶಿ ಜಲಜಾಕ್ಷಿ ಕುಲಾಲ್, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ, ಸದಸ್ಯರಾದ ಮಚ್ಚೇಂದ್ರ ಸಾಲ್ಯಾನ್, ನಾರಾಯಣ ಸಿ.ಪೆರ್ನೆ, ಸತೀಶ್ ಕುಲಾಲ್ ಉಪಸ್ಥಿತರಿದ್ದರು.