ಟಿಪ್ಪರ್ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ
ಕೈಕಂಬ : ಮೂಡಬಿದ್ರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ(೧೬೯) ಗುರುಪುರ ಸರ್ಕಾರಿ ಪಿಯು ಕಾಲೇಜಿನ ಬಳಿ ವೇಗವಾಗಿ ಬಂದ ಟಿಪ್ಪರ್ ಎರಡು ೩ ದ್ವಿಚಕ್ರ ವಾಹನಗಳು ಹಾಗೂ ಎದುರಿನಲ್ಲಿ ಸಾಗುತ್ತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದು, ಓರ್ವಗೆ ಗಂಭೀರ ಗಾಯವಾದ ಘಟನೆ ನ. ೧೭ರಂದು ಶುಕ್ರವಾರ ಬೆಳಿಗ್ಗೆ ನಡೆದಿದೆ.

ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಜಲ್ಲಿಹುಡಿ ತುಂಬಿದ್ದ ಟಿಪ್ಪರ್ನ ಅಡಿಗೆ ಸ್ಕೂಟರ್ ಬಿದ್ದು ಜಖಂಗೊಂಡಿದೆ, ಸ್ಕೂಟರ್ ಸವಾರ ಎಡಪದವು ಶಾಲೆಯ ಹತ್ತಿರದ ನಿವಾಸಿ ಮಿಥುನ್ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಡಪದವು ಮೂಲದ ಟಿಪ್ಪರ್, ಸ್ಕೂಟರ್ಗೆ ಡಿಕ್ಕಿ ಹೊಡೆಯುವುದಕ್ಕಿಂತ ಮುಂಚೆ ರಸ್ತೆ ಬದಿಯಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಮತ್ತೊಂದು ಸ್ಕೂಟರ್ ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಲ್ಲಿದ್ದ ಗುರುಪುರದ ವ್ಯಕ್ತಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆದಿದೆ. ಟಿಪ್ಪರಿನಡಿಗೆ ಬಿದ್ದ ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆ ಬಳಿಕ ಸುಮಾರು ಅರ್ಧ ತಾಸು ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ, ವಾಹನ ಸಂಚಾರ ಸುಗಮಗೊಳಿಸಿದರು.