ಕುಪ್ಪೆಪದವು: ಜೈನ್ ಮಿಲನ್ ನಿಂದ ಆಟಿಡೊಂಜಿ ದಿನ, ಸನ್ಮಾನ
ಕುಪ್ಪೆಪದವು:: ಅನಂತ ಪಾರ್ಶ್ವ ಜೈನ್ ಮಿಲನ್ ಕುಪ್ಪೆಪದವು ಇದರ ಮಾಸಿಕ ಸಭೆ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮವು ಅಗರಿ ಪ್ರವೀಣ್ ಕುಮಾರ್ ಅವರ ಮನೆಯಲ್ಲಿ ಭಾನುವಾರ ನಡೆಯಿತು. ಹಗ್ಗ ಜಗ್ಗಾಟ, ಪಾಸ್ ದ ಬಾಲ್ ,ದಂಪತಿಗಳಿಗೆ ಸ್ಟ್ರಾ ಆಟ, ಚೆನ್ನೆದ ಮಣ್ಣೆ ಸಹಿತ ಗ್ರಾಮೀಣ ಆಟೋಟಗಳನ್ನು, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರಾತನವಾದ ಅಗರಿ ಬಸದಿಯ ಪಾರ್ಶ್ವನಾಥ ಸ್ವಾಮಿ , ಪದ್ಮಾವತಿ ದೇವಿಗೆ ಪೂಜೆ ಮತ್ತು ನಮೋಕಾರ ಮಂತ್ರದೊಂದಿಗೆ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕುಮಾರಿ ಪೂರ್ವಿತಾ ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ಲತಾ ಅಜಿತ್ ಕುಮಾರ್ ಆಟಿ ತಿಂಗಳಲ್ಲಿ ಜೈನ ಶ್ರಾವಕರು ದಿನನಿತ್ಯ ಮಾಡಬೇಕಾದ ಪ್ರಮುಖ ಅನುಷ್ಠಾನಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಧನಕೀರ್ತಿ ಬಲಿಪರು ಆಟಿ ತಿಂಗಳ ಮಹತ್ವ, ಇಂದು ಆಚರಿಸುತ್ತಿರುವುದರ ಅಗತ್ಯತೆ ಬಗ್ಗೆ ಮಾತನಾಡಿ ಆಟಿ ಕಳಂಜ ಪಾಡ್ಡನ ಹಾಡಿ ರಂಜಿಸಿದರು. 35 ವಿವಿಧ ಬಗೆಯ ಆಟಿ ತಿಂಗಳ ಗ್ರಾಮೀಣ ಖಾದ್ಯಗಳನ್ನು ತಯಾರಿಸಿ ತಂದಿದ್ದ ಸದಸ್ಯರನ್ನು ಗೌರವಿಸಲಾಯಿತು.

ಜೈನ್ ಮಿಲನ್ ನ ಮಾಜಿ ಅಧ್ಯಕ್ಷ ಅಕ್ಷಯ್ ಕುಮಾರ್ ಮತ್ತು ಹಿರಿಯರನ್ನು ಇದೇ ವೇಳೆ ಫಲ ಕಾಣಿಕೆ ನೀಡಿ ಗೌರವಿಸಲಾಯಿತು. . ಗೌರವ ಅಧ್ಯಕ್ಷರಾಗಿ ವೀರ್ ಪ್ರವೀಣ್ ಕುಮಾರ್ ಅಗರಿ, ಅಗರಿ ಮನೆತನದ ಹಿರಿಯರಾದ ನಿರ್ಮಲಮ್ಮ, ವಿಜಯಮ್ಮ, ಪ್ರಭಾಕರ, ಸರಸ್ವತಿ ಅಮ್ಮ, ಕಾರ್ಯದರ್ಶಿ ಹರ್ಷಲತಾ ಜೈನ್, ಜೈನ್ ಮಿಲನ್ ಘಟಕದ ಸ್ಥಾಪಕಾಧ್ಯಕ್ಷ ಭೋಜರಾಜ್ ಜೈನ್ ಮೊದಲಾದವರು ವೇದಿಕೆಯಲ್ಲಿದ್ದರು. ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು. ಶ್ರಾವ್ಯ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಅನ್ವಿತಾ ಜೈನ್ ಸ್ವಾಗತಿಸಿದರು. ಹರ್ಷಲತಾ ವರದಿ ವಾಚಿಸಿದರು.
ಕುಮಾರಿ ಉಜ್ವಲ ಕಂಬಳಿ ನಿರೂಪಿಸಿ, ಪದ್ಮಪ್ರಸಾದ್ ಶಾಂತಿ ಮಂತ್ರ ಪಠಿಸಿದರು.