ರೈಲು ದುರಂತ ತಪ್ಪಿಸಿದ ಆಯರಮನೆ ಚಂದ್ರಾವತಿಗೆ
ಕುಡುಪು ಭಟ್ರ ಕಲ್ಲುರ್ಟಿ ಸೇವಾ ಸಮಿತಿಯಿಂದ ಸನ್ಮಾನ
ಕೈಕಂಬ: ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಸಂಭನೀಯ ಅವಘಡ ತಪ್ಪಿಸಿದ ಕುಡುಪು ಮಂದಾರ(ಪಚ್ಚನಾಡಿ) ಸಮೀಪದ ಆಯರಮನೆ ನಿವಾಸಿ ಚಂದ್ರಾವತಿ ಅವರಿಗೆ ಕುಡುಪುವಿನಲ್ಲಿ ನಡೆದ ಕಾರಣಿಕದ ಭಟ್ರೆ ಕಲ್ಲುರ್ಟಿ ವಾರ್ಷಿಕ ಕೋಲೋತ್ಸವದ ಸಂದರ್ಭದಲ್ಲಿ ಭಟ್ರ ಕಲ್ಲುರ್ಟಿ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕೆಲವು ದಿನಗಳ ಹಿಂದೆ ಪಚ್ಚನಾಡಿ ಬಳಿ ರೈಲು ಹಳಿಯ ಮೇಲೆ ಬೃಹತ್ ಮರವೊಂದು ಕುಸಿದು ಬಿದ್ದ ದೃಶ್ಯ ಗಮನಿಸಿದ ೭೦ರ ಹರೆಯದ ಚಂದ್ರಾವತಿಯವರು ತಕ್ಷಣ ಎಚ್ಚೆತ್ತುಕೊಂಡು ಮನೆಯಲ್ಲಿ ಒಣಗಲು ಹಾಕಿದ್ದ ಕೆಂಪು ಬಣ್ಣದ ಬರ್ಮುಡ ಚಡ್ಡಿಯನ್ನು ತಂದು, ದೂರದಲ್ಲಿ ಬರುತ್ತಿದ್ದ ರೈಲಿನ ಮೋಟಾರ್ಮ್ಯಾನ್ಗೆ ಕಾಣುವಂತೆ ಬೀಸಿದರು. ಸಿಗ್ನಲ್ ಗಮನಿಸಿದ ಮೋಟಾರ್ಮ್ಯಾನ್ ರೈಲನ್ನು ಸ್ಲೋ ಮಾಡಿದ್ದರಿಂದ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿತ್ತು.
ಹೃದ್ರೋಗಿಯಾಗಿದ್ದರೂ ಧೈರ್ಯ ತೋರಿ, ರೈಲಿನಲ್ಲಿದ್ದ ಹಲವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಚಂದ್ರಾವತಿ ನಮ್ಮೂರಿನವರು ಎನ್ನಲು ಸಂತೋಷವಾಗುತ್ತಿದೆ ಎಂದು ಮಾಜಿ ಮೇಯರ್ ಹಾಗೂ ಸ್ಥಳೀಯ ಹಾಲಿ ಕಾರ್ಪೊರೇಟರ್ ಭಾಸ್ಕರ್ ಕೆ., ಹೇಳಿದರು.
ಭಟ್ರ ಕಲ್ಲುರ್ಟಿ ಸಾನಿಧ್ಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮನೋಹರ ಭಟ್, ಪ್ರಭಾಕರ ಭಟ್, ಜನಾರ್ದನ ಬಿ, ಉದಯ ಕುಮಾರ್ ಕುಡುಪು, ಚಂದ್ರಹಾಸ ಕೆ, ನಾಗೇಶ್ ಚೌಕಿ, ಚಂದ್ರಾವತಿಯವರ ಪುತ್ರರಾದ ನವೀನ್ ಕುಮಾರ್, ದಯಾನಂದ ಹಾಗೂ ಪುತ್ರಿ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಭಕ್ತರು ಉಪಸ್ಥಿತರಿದ್ದರು.