ಮೆಲ್ಕಾರ್ -ಮುಡಿಪು ರಸ್ತೆಯ ಅನಧಿಕೃತ ಅಂಗಡಿಗಳ ತೆರವು
ಬಂಟ್ವಾಳ: ಮೆಲ್ಕಾರ್ ಜಂಕ್ಷನ್ನಿಂದ ಮುಡಿಪು ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಇಟ್ಟಿದ್ದ ಅಂಗಡಿಗಳನ್ನು ಪುರಸಭಾ ಅಧಿಕಾರಿಗಳು ದ.ಕ.ಜಿಲ್ಲಾಧಿಕಾರಿಗಳ ಆದೇಶದಂತೆ ಸೋಮವಾರ ಕಾರ್ಯಾಚರಣೆಯ ನಡೆಸಿ ತೆರವು ಮಾಡಿದ್ದಾರೆ.

ಪುರಸಭೆಯ ಮುಖ್ಯಾಧಿಕಾರಿ ಸ್ವಾಮಿ ಎಂ.ಆರ್., ಕಂದಾಯ ಅಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ನಿಯೋಗ ತೆರವು ಕಾರ್ಯ ನಡೆಸಿದೆ. ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಮುದಾಯ ಸಂಘಟಕಿ ಉಮಾವತಿ ಹಾಗೂ ಸಿಬಂದಿ, ಲೋಕೋಪಯೋಗಿ ಇಲಾಖೆ ಅಽಕಾರಿಗಳು ಉಪಸ್ಥಿತರಿದ್ದರು.

ರಸ್ತೆಯ ಎರಡೂ ಬದಿಯ ಪುಟ್ಪಾತ್ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳ ಮೂಲಕ ತರಕಾರಿ, ಹಣ್ಣು ಹಂಪಲು, ಮೀನು, ಕೋಳಿ ವ್ಯಾಪಾರ, ಕ್ಯಾಂಟೀನ್, ಗೂಡಂಗಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಇವುಗಳ ತೆರವಿಗೆ ಕ್ರಮಕೈಗೊಳ್ಳಲು ಡಿಸಿಯವರು ಪುರಸಭೆಗೆ ಆದೇಶಿಸಿದ್ದರು.