ಗುರುಪುರ ಬಂಟರ ಮಾತೃ ಸಂಘದಿಂದ
ಡಾ. ಜಯರಾಮ ಶೆಟ್ಟಿಯವರಿಗೆ ನುಡಿನಮನ
ಕೈಕಂಬ : ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಹಾಗೂ ವಿಭಾಗದ ಮುಖ್ಯಸ್ಥ, ಗುರುಪುರ ಪರಾರಿ ಕೊಳಕೆಬೈಲು ನಿವಾಸಿ ಡಾ. ಜಯರಾಮ ಶೆಟ್ಟಿ ಅವರ ಆತ್ಮಸದ್ಗತಿಗೆ ಗುರುಪುರ ಬಂಟರ ಮಾತೃ ಸಂಘ(ರಿ) ವತಿಯಿಂದ ಭಾನುವಾರ ಗುರುಪುರ ಕುಕ್ಕುದಕಟ್ಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಯಿತು.

ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಶೆಡ್ಡೆ ಮಾತನಾಡಿ, ಡಾ. ಜಯರಾಮ ಶೆಟ್ಟಿ ಅವರು ಬಂಟ ಸಮಾಜದೊಂದಿಗೆ ಅನ್ಯ ಸಮಾಜದ ಬಂಧುಗಳಿಗೂ ಆತ್ಮೀಯರಾಗಿದ್ದ ವೈದ್ಯ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿರುವ ಅವರ ಅಗಲುವಿಕೆಯಿಂದ ಸಂಘ ಓರ್ವ `ಸೇವಾನಿಷ್ಠ’ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದರು.
ಸಂಘದ ಕಾರ್ಯದರ್ಶೀ ಹರೀಶ್ ಶೆಟ್ಟಿ ಉಪ್ಪುಗೂಡು ಮಾತನಾಡಿ, ಜಯರಾಮ ಶೆಟ್ಟಿ ಅವರು ಕಷ್ಟದಲ್ಲಿರುವ ರೋಗಿಗಳಿಗೆ ತನ್ನಿಂದಾದ ಸಹಾಯ ಮಾಡುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಸರಳತೆ ಮತ್ತು ಪ್ರಶಾಂತತೆ ಮೈಗೂಡಿಸಿಕೊಂಡಿದ್ದ ವೈದ್ಯರಾಗಿದ್ದರು ಎಂದರು.
ಪತ್ರಕರ್ತ ಧನಂಜಯ ಗುರುಪುರ ಅವರು ಡಾ. ಶೆಟ್ಟಿಯವರು ತನ್ನ ತರಗತಿ ಮಿತ್ರರಾಗಿದ್ದ ದಿನಗಳ ಚಟುವಟಿಕೆಗಳ ಬಗ್ಗೆ ನೆನಪಿಸಿಕೊಂಡರು. ಕೋಶಾಧಿಕಾರಿ ಜಯರಾಮ ಶೆಟ್ಟಿ ವಿಜೇತ ಕೈಕಂಬ ಅವರು ಸ್ವಾಗತಿಸಿದರು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ನಳಿನಿ ಶೆಟ್ಟಿ, ಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪದಾಧಿಕಾರಿ ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಸ್ತಾವಿಸಿದರು.