ಕೈಕಂಬ : ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ಇದರ ಆಶ್ರಯದಲ್ಲಿ ಜ. ೮ರಂದು ಎಡಪದವಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಿವಿಧ ಕ್ರೀಡಾ ಸ್ಪರ್ಧೆ, ಸಮಾಜದ ನಿವೃತ್ತರಿಗೆ ಅಭಿನಂದನೆ ಹಾಗೂ ಮನೋರಂಜನೆಯೊಂದಿಗೆ ೫ನೇ ವರ್ಷದ ಮರಾಠಿ ಸಮ್ಮಿಲನ-೨೦೨೩ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ(ರಿ) ಅಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ ಮಾತನಾಡಿ, ಸಮಾಜದ ಮಂದಿ ಸರ್ಕಾರಿ ಸವಲತ್ತು ಪಡೆಯಲು ಮುಂದೆ ಬರಬೇಕು. ನಮ್ಮ ಸಮಾಜಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಲ್ಲಿ ಸವಲತ್ತುಗಳ ಸದ್ಬಳಕೆ ಆಗುತ್ತಿಲ್ಲ. ಈ ಬಗ್ಗೆ ನಾವು ಜಾಗೃತರಾಗಬೇಕು. ಸಂಘವು ಈ ಬಾರಿ ನಿವೃತ್ತರ ಗುರುತಿಸಿ ಗೌರವಿಸುವ ಮೂಲಕ ಹಿರಿಯರ ಗೌರವಕ್ಕೆ ಪಾತ್ರವಾಗಿದೆ ಎಂದರು.

ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶೇಖರ ಕಡ್ತಲ ಮಾತನಾಡಿ, ಅನಾದಿ ಕಾಲದಿಂದಲೂ ನಮ್ಮ ಸಮಾಜ ಸಂಘಟನೆಯಡಿಯಲ್ಲಿ ಬೆಳೆದು ಬಂದಿದೆ. ಉದಾಹರಣೆಗೆ ಗೋಂದ್ಲು ಸೇವೆ, ಕುಲದೇವರ ಆರಾಧನೆ, ಹೋಳಿ ಕುಣಿತ, ಗದ್ದಿಗೆ ಪೂಜೆ, ಹತ್ತರಕಟ್ಟೆ, ಕೂಡುವಳಿಕೆ, ಹತ್ತು ಸಮಸ್ತರ ಸಂಘಟನೆ ಈಗಲೂ ಚಾಲ್ತಿಯಲ್ಲಿದೆ. ಸಂಪ್ರದಾಯ, ಆಚಾರ-ವಿಚಾರ, ಭಾಷೆಯ ಪಡಿಯಚ್ಚಿನಲ್ಲಿ ಬೆಳೆಯಬೇಕು. ನಮ್ಮ ಸಮಾಜದ ಜನರ ಒಗ್ಗೂಡಿಸಿ, ಬಾಂಧವ್ಯ ವೃದ್ಧಿಸಿ ಎಲ್ಲರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದೇ ಮರಾಠಿ ಸಮ್ಮಿಲನದ ಉದ್ದೇಶ ಎಂದರು.

ಬೆಳಿಗ್ಗೆ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ನಡೆದ ಬಳಿಕ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆ, ಬಹುಮಾನ ವಿತರಣೆ ಹಾಗೂ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾಗಿರುವ ಸಮಾಜದ ಎಂ. ಜಾಣು ನಾಯ್ಕ್(ಇಂಡಿಯನ್ ಬ್ಯಾಂಕ್), ಬೂಬ ನಾಯಿಕ್(ಇಂಡಿಯನ್ ರೈಲ್ವೇ), ನಾರಾಯಣ ನಾಯ್ಕ್(ಎನ್ಐಟಿಕೆ), ವಿಶ್ವನಾಥ ನಾಯ್ಕ್(ಮಂಗಳೂರು ವಿವಿ ಕೊಣಾಜೆ), ಮಹಾಲಿಂಗ ನಾಯ್ಕ್(ಶಿಕ್ಷಕ), ಕೃಷ್ಣ ನಾಯ್ಕ್(ಶಿಕ್ಷಕ), ಯಿರೋಹಿಣಿ ನಾಯ್ಕ್ ಗಂಜಿಮಠ(ಸ್ಟೇಟ್ ಬ್ಯಾಂಕ್ ಆಫ್ ಮೈಸೂರು), ಬಿ. ರಾಘವ ನಾಯ್ಕ್ ನೀರುಮಾರ್ಗ(ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್), ಪಿ. ಲೀಲಾವತಿ ಎನ್ ನಾಯ್ಕ್(ಆರೋಗ್ಯ ಇಲಾಖೆ ಪಂಜಿಕಲ್ಲು), ಜಗದೀಶ ನಾಯ್ಕ್(ಎನ್ಎಂಪಿಟಿ ಪಣಂಬೂರು), ತಿಮ್ಮಪ್ಪ ನಾಯ್ಕ್(ಭಾರತೀಯ ರೈಲ್ವೆ ನಿಗಮ), ಭೋಜ ನಾಯ್ಕ್(ಪಶುಸಂಗೋಪನಾ ಇಲಾಖೆ) ಮತ್ತು ಬಿ. ಕೆ. ನಾಯ್ಕ್(ರೇಷ್ಮೆ ಇಲಾಖೆ ಮಂಗಳೂರು) ಇವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ವಿ. ಪಿ. ನಾಯ್ಕ್ ಸ್ವಾಗತಿಸಿ, ವರದಿ ವಾಚಿಸಿದರು. ಕಾರ್ಯದರ್ಶಿ ಅಶೋಕ್ ನಾಯ್ಕ್ ಪ್ರಸ್ತಾವಿಕ ಮಾತನಾಡಿದರು. ಜಿಲ್ಲಾ ಮರಾಠಿ ಸಂಘದ ಅಧ್ಯಕ್ಷ ರವಿ ಪ್ರಸಾದ್, ರಾಮಚಂದ್ರ ಕೆಂಬಾರೆ, ಕೇಶವ ನಾಯ್ಕ್, ಸುಲತಾ ಎಸ್, ಪುರಂದರ, ಗುಣಪಾಲ, ನಾರಾಯಣ ನಾಯ್ಕ್, ರಾಮ ನಾಯ್ಕ್, ಸುಂದರ ನಾಯ್ಕ್, ಸಂಘದ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಶ್ರಾವ್ಯಾ ಮತ್ತು ನಿವೇದಿತಾ ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಜಾಣು ನಾಯ್ಕ್ ಅವರು ಸಂಘದ ಚಟುವಟಿಕೆ ಮೆಚ್ಚಿ ೫೦ ಸಾವಿರ ರೂ ಚೆಕ್ ನೀಡಿದರು. ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ ಸಮಾಜದ ಕೆಲವರನ್ನು ಗೌರವಿಸಲಾಯಿತು. ಮಧ್ಯಾಹ್ನ ಸಂಘದ ವತಿಯಿಂದ ಸದಸ್ಯರು ಸಿದ್ಧಪಡಿಸಿದ ೨೨ ಬಗೆಯ ಪಲ್ಯ-ಖಾದ್ಯದೊಂದಿಗಿನ ಸಹಭೋಜನ ಏರ್ಪಡಿಸಲಾಗಿತ್ತು.
