ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಚೆನ್ನೈ: ಬಿಜೆಪಿ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ (Coimbatore) ನಡೆದಿದೆ.

ತಮಿಳುನಾಡಿನ (Tamil Nadu) ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಾಂಬ್ ಎಸೆಯುವ ಮೊದಲು ಬಿಜೆಪಿ ಕಚೇರಿ ಬಳಿ ಕೆಲವರು ಅನುಮಾನಸ್ಪದವಾಗಿ ಚಲಿಸಿರುವುದು ಕಂಡುಬಂದಿದೆ. ಘಟನೆಯಲ್ಲಿ ಯಾವುದೇ ಹಾನಿ ಅಥವಾ ಯಾರಿಗೂ ತೊಂದರೆಯೂ ಆಗಲಿಲ್ಲ. ಈ ರೀತಿ ಘಟನೆಯು ಬಿಜೆಪಿ ಕಾರ್ಯಕರ್ತರನ್ನು ತಡೆಯುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (Annamalai) ಟ್ವೀಟ್ ಮಾಡಿದ್ದಾರೆ.

ಟ್ವೀಟ್ನಲ್ಲಿ ಏನಿದೆ?: ಕೊಯಮತ್ತೂರು ಪಕ್ಷದ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ್ದಾರೆ. ಆದರೆ ಈ ಘಟನೆಯಿಂದ ನಮ್ಮ ಸಹೋದರ ಸಹೋದರಿಯರನ್ನು ತಡೆಯಲು ಸಾಧ್ಯವಿಲ್ಲ. ಇದು ನಮ್ಮ ಸಮಾಜ ಮತ್ತು ದೇಶಕ್ಕೆ ದ್ರೋಹ ಬಗೆಯುವ ಶಕ್ತಿಗಳ ವಿರುದ್ಧ ಕಠಿಣವಾಗಿ ಹೋರಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.
ಗುರುವಾರ ದೇಶಾದ್ಯಂತ ಹಲವು ಭಾಗಗಳಲ್ಲಿ ಪಿಎಫ್ಐ ಕಚೇರಿಗಳು ಹಾಗೂ ಅದರ ಪದಾಧಿಕಾರಿಗಳ ನಿವಾಸಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್ ತುಂಬಿದ ಬಾಟಲಿಯು ಪಕ್ಷದ ಕಚೇರಿಯ ಕೆಳಗೆ ಬಿದ್ದಿರುವುದು ಕಂಡುಬಂದಿದೆ.