ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್ಗೆ ಮೋದಿ ಚಾಲನೆ
ತಿರುವನಂತಪುರಂ: ಭಾರತದಲ್ಲೇ ತಯಾರಾದ ಮೊದಲ ವಿಮಾನ ವಾಹಕ ನೌಕೆ ವಿಕ್ರಾಂತ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಕೇರಳದ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿದ್ದಾರೆ.

ಭಾರತ ಇದೀಗ ನಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ವಿಕ್ರಾಂತ್ ವಿಮಾನ ವಾಹಕ ನೌಕೆ ಒಂದು ದೊಡ್ಡ, ಭವ್ಯ, ವಿಭಿನ್ನ ಹಾಗೂ ವಿಶೇಷ ಎಂದು ಮೋದಿ ಬಣ್ಣಿಸಿದರು.
ವಿಕ್ರಾಂತ್ ನೌಕಾಪಡೆಯನ್ನು ಆಂತರಿಕ ಯುದ್ಧನೌಕೆ ವಿನ್ಯಾಸ ಬ್ಯೂರೋ (ಡಬ್ಲ್ಯುಡಿಬಿ) ವಿನ್ಯಾಸಗೊಳಿಸಿದೆ. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ಇದನ್ನು ನಿರ್ಮಿಸಿದೆ. ವಿಕ್ರಾಂತ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನ್ಯಾವಿಗೇಷನ್ ಮತ್ತು ಯಾಂತ್ರೀಕೃತಗೊಂಡ ವಿಶೇಷತೆಗಳನ್ನು ಹೊಂದಿದೆ. ಇದು ಭಾರತದ ಕಡಲ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಎಲ್ಲಾ 4 ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. 2ನೇಯದು ಅಕ್ಟೋಬರ್ 21ರಂದು ಮತ್ತು 3ನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. ವಿಕ್ರಾಂತ್ ಕೊನೆಯ ಮತ್ತು 4ನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು, ಇದು ಆಗಸ್ಟ್ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.