ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಶ್ವಾಸಮತ ಯಾಚನೆ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶಾಸಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಸಿಎಂ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಟ್ಟಾರೆ ಅಧಿಕಾರ ಯುದ್ಧದಲ್ಲಿ ಬಿಜೆಪಿ- ಶಿವಸೇನಾ ಬಾಲ ಠಾಕ್ರೆ ಬಣಕ್ಕೆ ಮತ್ತೊಂದು ಗೆಲುವು ಲಭ್ಯವಾಗಿದೆ.
ಶಿಂಧೆ ಸರ್ಕಾರ 164-99 ಮತಗಳ ಭರ್ಜರಿ ಅಂತರದಲ್ಲಿ ವಿಶ್ವಾಸ ಮತ ಗೆದ್ದಿದೆ. 3 ಸದಸ್ಯರು ವಿಧಾನಸಭೆ ಅಧಿವೇಶನಕ್ಕೆ ಗೈರಾಗಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಮಹಾವಿಕಾಸ ಆಘಾಡಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿಯೊಂದಿಗೆ ಸೇರಿ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ
ಉದ್ಧವ್ ಠಾಕ್ರೆಯೊಂದಿಗೆ ಗುರುತಿಸಿಕೊಂಡಿದ್ದ ಮತ್ತೊಬ್ಬ ಶಾಸಕ, ಸಂತೋಶ್ ಬಂಗಾರ್ ಎಂಬುವವರೂ ಕೂಡ ಇಂದು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಶಿಂಧೆ ಕಡೆಯ ಶಾಸಕರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಇದಕ್ಕೂ ಹಿಂದೆ ಶಿಂಧೆ – ಬಿಜೆಪಿ ದೋಸ್ತಿ ತಮ್ಮ ಕಡೆಯ ರಾಹುಲ್ ನರ್ವೇಕರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು.
ಮಹಾರಾಷ್ಟ್ರ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ-ಶಿವಸೇನೆ ರೆಬೆಲ್ ಶಾಸಕರ ಬಣದ ಮೈತ್ರಿ ಸಿಎಂ ಏಕನಾಥ್ ಶಿಂಡೆ ಜಯಗಳಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಇಂದು ನಿಜವಾದ ಶಿವಸೈನಿಕ ಮಹಾರಾಷ್ಟ್ರ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ. ಈಗ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದ್ದು, ಇಂದು ನಡೆದ ವಿಶ್ವಾಸಮತ ಯಾಚನೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು. ಆದರೆ ನಮ್ಮನ್ನು ಉದ್ದೇಶಪೂರ್ವಕವಾಗಿ ಬಹುಮತದಿಂದ ದೂರವಿಡಲಾಗಿದೆ. ಆದರೆ ಏಕನಾಥ್ ಶಿಂಧೆ ಅವರೊಂದಿಗೆ ನಾವು ಮತ್ತೊಮ್ಮೆ ಶಿವಸೇನೆಯೊಂದಿಗೆ ನಮ್ಮ ಸರ್ಕಾರವನ್ನು ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ. ನನ್ನ ಪಕ್ಷದ ಆಜ್ಞೆಯಂತೆ ನಾನು ಉಪ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಶಿವ ಸೇನಾ ಶಾಸಕರ ಅನರ್ಹತೆಯ ಪ್ರಶ್ನೆ ನ್ಯಾಯಾಲಯದ ಜೂನ್ 11 ಕ್ಕೆ ಕೋರ್ಟು ಆ ಅರ್ಜಿಯ ವಿಚಾರಣೆ ಎತ್ತಿಕೊಳ್ಳಲಿದೆ. ಬಹುತೇಕ ಅದು ಕೂಡಾ ಶಿಂಧೆ ಪಾಳಯದ ಪರ ಆಗಲಿದೆ ಎನ್ನುವುದು ಕಾನೂನು ತಜ್ಞರ ಅಭಿಮತ. ಒಂದುವೇಳೆ ಅವರು ಅನರ್ಹ ರಾದರೂ, ಸರ್ಕಾರಕ್ಕೆ ಅಗತ್ಯ ಬೆಂಬಲ ಇರುವ ಕಾರಣ ಸರಕಾರ ಭದ್ರ.
.

