ಬಂಟ್ವಾಳ: ತಾಲ್ಲೂಕಿನ ವಿದ್ಯಾಗಿರಿ ಅರ್ಬಿಗುಡ್ಡೆ ಎಂಬಲ್ಲಿ ಕೇಂದ್ರ ಸರ್ಕಾರದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ರೂ ೧೧ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ೧೧ ಕೆವಿ ಸಾಮರ್ಥ್ಯದ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರವನ್ನು ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತಿತರರು ಇದ್ದಾರೆ.
ರಾಜ್ಯದಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಜೊತೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗದAತೆ ತಡೆಯಲು ಹೆಚ್ಚುವರಿ ಸಬ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಕಳೆದ ೭ ವರ್ಷಗಳ ಬಳಿಕ ಪ್ರಥಮ ಹಂತದಲ್ಲೇ ೫೦೨೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮೂಲಕ ಕಲ್ಲಿದ್ದಲು ಕೊರತೆ ಉಂಟಾಗಿಲ್ಲ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಿರಿ ಅರ್ಬಿಗುಡ್ಡೆ ಎಂಬಲ್ಲಿ ಕೇಂದ್ರ ಸರ್ಕಾರದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ರೂ ೧೧ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ೧೧ ಕೆವಿ ಸಾಮರ್ಥ್ಯದ ‘ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರ’ವನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಈಗಾಗಲೇ ಮೈಸೂರು ಸಹಿತ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಾ ಯುನಿಟ್ ಕಾರ್ಯಾರಂಭಗೊಂಡಿದೆ ಎಂದರು.
ಕೇಂದ್ರ ಸರ್ಕಾರದ ಶೇ.೬೦ ಮತ್ತು ಮೆಸ್ಕಾಂ ನ ಶೇ.೪೦ ರಷ್ಟು ಪಾಲುದಾರಿಕೆಯಲ್ಲಿ ಅವಿಭಜಿತ ಜಿಲ್ಲೆಯ ಮಂಗಳೂರು ಉರ್ವ, ಉದ್ಯಾವರ, ಕೋಟ, ಬಂಟ್ವಾಳ ಹೀಗೆ ೪ ಕಡೆ ಒಟ್ಟು ರೂ ೩೯ ಕೋಟಿ ವೆಚ್ಚದಲ್ಲಿ ‘ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರ’ ಆರಂಭಿಸಲಾಗಿದ್ದು, ಈ ಪೈಕಿ ಬಂಟ್ವಾಳದಲ್ಲಿ ಪ್ರಥಮ ಬಾರಿಗೆ ಕಾರ್ಯಾರಂಭಿಸಿದೆ. ಇದರಿಂದ ಸ್ಥಳೀಯ ೧೪ ಸಾವಿರ ಮನೆಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ ಎಂದರು.
ಈಗಾಗಲೇ ಇಲಾಖೆಗೆ ೮೯೯ ಮಂದಿ ಪವರ್ ಮೆನ್ ನೇಮಕಾತಿ ನಡೆದಿದ್ದು, ಮತ್ತೆ ೧೫೦೦ ಮಂದಿ ಸಿಬ್ಬಂದಿ ನೇಮಕಾತಿ ನಡೆಯಲಿದೆ. ಪವರ್ ಮೆನ್ ಗಳ ರೂ ೨೦ ಲಕ್ಷ ಜೀವವಿಮೆ ರೂ ೪೦ಲಕ್ಷಕ್ಕೆ ಏರಿಸಲಾಗಿದೆ. ಜೂನ್ ಮೊದಲ ವಾರದಲ್ಲೇ ರಾಜ್ಯದೆಲ್ಲೆಡೆ ೧ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೈಸೂರು ವಿದ್ಯುತ್ ನಿಗಮ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಒಳಚರಂಡಿ ನಿಗಮ ಮಂಡಳಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಬಿ. ಅರಳ, ಪುರಸಭಾ ಸದಸ್ಯ ಹರಿಪ್ರಸಾದ್, ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಣೇಶ್ ಸುವರ್ಣ, ಪ್ರಮುಖರಾದ ಉದಯ ಕುಮಾರ್ ರಾವ್, ಮಹೇಶ್ ತುಪ್ಪೆಕಲ್ಲು, ಪುಷ್ಪರಾಜ್ ಚೌಟ, ಸುದರ್ಶನ್ ಬಜ, ಸುಕೇಶ್ ಚೌಟ, ಸೀಮಾ ಮಾಧವ, ಪುರುಷೋತ್ತಮ ಶೆಟ್ಟಿ, ಗಣೇಶದಾಸ್, ಮಹೇಶ್ ಶೆಟ್ಟಿ, ಕೇಶವ ದೈಪಲ, ನಂದರಾಮ ರೈ, ಯಶೋಧರ ಕರ್ಬೆಟ್ಟು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಮೆಸ್ಕಾಂ ಎಂ.ಡಿ.ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಹಿರಿಯ ಎಂಜಿನಿಯರ್ ಹರೀಶ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಪ್ರಶಾಂತ್ ಪೈ, ವಸಂತ ಶೆಟ್ಟಿ, ನಾರಾಯಣ ಭಟ್ ಬಂಟ್ವಾಳ, ರಾಮಚಂದ್ರ ಪುತ್ತೂರು, ಶಿವಶಂಕರ್ ಬೆಳ್ತಂಗಡಿ ಮತ್ತಿತರರು ಇದ್ದರು.
