ಚೆನ್ನೈ: ಈದ್ ಹಬ್ಬದ ಪ್ರಯುಕ್ತ ಸ್ನೇಹಿತರನ್ನು ಮನೆಗೆ ಔತಣಕ್ಕೆಂದು ಆಹ್ವಾನಿಸಿದ್ದ ವೇಳೆ 32 ವರ್ಷದ ವ್ಯಕ್ತಿಯೋರ್ವ ಬಿರಿಯಾನಿ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿದ್ದಾನೆ. ನಂತರ ಆತನ ಹೊಟ್ಟೆಯನ್ನು ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಆಭರಣಗಳು ಪತ್ತೆಯಾಗಿದೆ.

ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ 3ರಂದು ಈದ್ ಪ್ರಯುಕ್ತ ತನ್ನ ಸ್ನೇಹಿತರನ್ನು ಔತಣಕ್ಕೆಂದು ಮನೆಗೆ ಕರೆದಿದ್ದರು. ಈ ವೇಳೆ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವ್ಯಕ್ತಿಯೋರ್ವ ನುಂಗಿ ಹಾಕಿದ್ದಾನೆ. ಅಲ್ಲದೇ ಈ ಸಮಯದಲ್ಲಿ ಆತ ಮದ್ಯ ಸೇವಿಸಿದ್ದ.

ಊಟ ಮುಗಿದು ಅತಿಥಿಗಳು ಮನೆಗೆ ತೆರಳಿದ ನಂತರ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಈ ಕುರಿತಂತೆ ಅತಿಥಿಗಳನ್ನು ವಿಚಾರಿಸಿದಾಗ, ಯುವತಿಯೊಬ್ಬಳು ತನ್ನ ಸ್ನೇಹಿತೆಯ ಗೆಳೆಯ ಚಿನ್ನಾಭರಣಗಳನ್ನು ಕದ್ದಿರಬಹುದು ಎಂದು ಶಂಕಿಸಿ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ನಂತರ ಮೇ 4 ರಂದು ಬುಧವಾರ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿಸಿದಾಗ ಆಭರಣಗಳು ಹೊಟ್ಟೆಯಲ್ಲಿರುವುದು ದೃಢಪಟ್ಟಿದೆ. ಇದೀಗ ವೈದ್ಯರು ಆತನಿಗೆ ಎನಿಮಾ (ಮಲ ಮತ್ತು ಉದರವಾಯುವನ್ನು ಹೊರಹಾಕಲು ಎನಿಮಾ ಚಿಕಿತ್ಸೆ ನೀಡಲಾಗುತ್ತದೆ) ನೀಡಿದ್ದು, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪೆಂಡೆಂಟ್ ಆತನ ಹೊಟ್ಟೆಯಲ್ಲಿಯೇ ಉಳಿದಿದ್ದು, ಅದನ್ನು ಹೊರ ತೆಗೆಯಲು ವೈದ್ಯರು ಆತನಿಗೆ ಔಷಧಿ ನೀಡಿದ್ದಾರೆ.
