ಮುಂಬಯಿ: ಕರ್ನಾಟಕ ಲೋಕಯುಕ್ತದಲ್ಲಿ ೫ ವರ್ಷ ಸೇವೆ ಸಲ್ಲಿಸಿದ ಬಳಿಕ ನನಗೆ ಜನಸಾಮಾನ್ಯರ ಕಷ್ಟಗಳ ಅರಿವಾಗಿದೆ. ನಮ್ಮಲ್ಲಿನ ಶಾಸಂಗ, ಕಾರ್ಯಾಂಗ, ನ್ಯಾಯಂಗ ಈ ೩ ಸಂಸ್ಥೆಗಳಿಂದಲೂ ಜನರಿಗೆ ಅನ್ಯಾಯವಾಗುತ್ತಿರುವುದು ಶೋಚನೀಯ. ಇಂದಿನ ಜನತೆಗೆ ಬೇಕಾಗಿರುವುದು ಬರೇ ಅಧಿಕಾರ ಮತ್ತು ಶ್ರೀಮಂತಿಕೆ. ಜೈಲು ಸೇರಿ ವಾಪಾಸ್ಸು ಬರುವ ವ್ಯಕ್ತಿಗಳಿಗೆ ಏರ್ಪೋರ್ಟ್ಗೆ ಹೋಗಿ ಹಾರಹಾಕಿಕೊಂಡು ಬರಮಾಡುವ ಅಸಹ್ಯಕಾಲ ಬಂದೊದಗಿಗೆ ಅಂದಮೇಲೆ ಹೇಳುವುದೇನೂ ಉಳಿದಿಲ್ಲ. ಅಂದರೆ ಪ್ರಸಕ್ತ ವಿಚಾರಗಳ ಕಾನೂನಿನಿಂದ ಬದಲಾವಣೆ ಅಸಾಧ್ಯ ಎಂದು ಭಾರತ ದೇಶದ ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ನಿಟ್ಟೆ ಸಂತೋಷಕುಮಾರ್ ಹೆಗ್ಡೆ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಸಂಜೆ ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿ ಕಿರು ಸಭಾಗೃಹದಲ್ಲಿ ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ ತನ್ನ ೨೦ನೇ ಮತ್ತು ೨೧ನೇ ವಾರ್ಷಿಕ ಮಹಾಸಭೆಗಳನ್ನು ಏಕಕಾಲಕ್ಕೆ ನಡೆಸಿದ್ದು ಸಂತೋಷ್ ಹೆಗ್ಡೆ ದೀಪಹಚ್ಚಿ ಮಹಾಸಭೆಗೆ ಚಾಲನೆಯನ್ನಿತ್ತು ಸಭೆಯನ್ನುದ್ದೇಶಿಸಿ ಮಾತನಾಡಿದರು.

ನ್ಯಾಯ ಮಂಡಳಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನ್ಯಾಯ ಮಂಡಳಿ ಪೋಷಕ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಹಾಗೂ ಬೊಂಬೇ ಬಂಟ್ಸ್ ಎಸೋಸಿಯೇಶನ್ನ ಉಪಾಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ ಅತಿಥಿ ಅಭ್ಯಾಗತರಾಗಿದ್ದು ೨೦೨೧ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕೃತ ಮುಂಬಯಿಯಲ್ಲಿನ ಹಿರಿಯ ಸಾಹಿತಿ, ಸಾಮಾಜಿಕ ಚಿಂತಕಿ, ಮಂಡಳಿಯ ಹಿರಿಯ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ ಮತ್ತು ಚಂದ್ರಶೇಖರ ಪಾಲೆತ್ತಾಡಿ ಇವರನ್ನು ಸಂತೋಷ್ ಹೆಗ್ಡೆ ಗೌರವಿಸಿದರು.

ಜೀವನದಲ್ಲಿ ತೃಪ್ತಿಗೆ ಮೇಲ್ಪಟ್ಟ ಸಂತೃಪ್ತಿ ಬೇರೊಂದಿಲ್ಲ. ನಮ್ಮಲ್ಲಿ ತೃಪ್ತಿ ಮತ್ತು ಮಾನವೀಯತೆ ಅನ್ನುವ ೨ ಮೌಲ್ಯಗಳಿದ್ದರೆ ಶಾಂತಿ ಸೌಹರ್ದತೆಯ ಬಾಳು ಸಾಧ್ಯ. ಪ್ರಸಕ್ತ ಮಾನವನಿಗೆ ಮಾನ ಮರ್ಯಾದೆಯ ಶಿಷ್ಟಾಚಾರವೇ ಇಲ್ಲದಿದ್ದು ಮರ್ಯಾದೆ, ತೃಪ್ತಿ ಮತ್ತು ಮಾನವೀಯತೆಗಳ ಭಾವನೆ ನಾವು ತಿಳಿದಾಗ ಮಾತ್ರ ಸಾಮರಸ್ಯದ ಬಾಳು ಹಸನವಾಗುವುದು ಎಂದು ತನ್ನ ಬಾಲ್ಯಾವಸ್ಥೆಯ ಶಾಲೆಯಲ್ಲಿನ ನೀತಿ ಪಾಠದ ಮಹತ್ವ ಮನವರಿಸಿದರು. ಹಾಗೂ ನಮ್ಮಲ್ಲಿನ ಹಗರಣಗಳಲ್ಲಿ ಸೊನ್ನೆಗಳು ಜಾಸ್ತಿ ಆಗುವಂತಿದ್ದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಜಸ್ಟೀಸ್ ಹೆಗ್ಡೆ ದುರಾಸೆ ಮಾತ್ರ ದೇಶದ ಅಭಿವೃದ್ಧಿ ಮಾಡಿದೆ ಎಂದರು.

ಚAದ್ರಹಾಸ ಶೆಟ್ಟಿ ಮಾತನಾಡಿ ನ್ಯಾಯ ಮಂಡಳಿಯ ಸಮಾಜದವರಿಂದ ಸಮಾಜಕ್ಕಾಗಿನ ಸೇವೆ ಪ್ರಶಂಸನೀಯ. ಬಂಟರ ತೊಂದರೆಗಳಿಗೆ ಪೂರಕವಾಗಿ ಸ್ಪಂದಿಸಿದ ತೃಪ್ತಿ ಈ ಮಂಡಳಿಗಿದೆ. ಸುಮಾತು ೫ ಲಕ್ಷ ಬಂಟರು ಇಲ್ಲಿದ್ದು ಊರಿಕ್ಕಿಂತ ಹೆಚ್ಚು ಬಂಟರು ಮುಂಬಯಿಯಲ್ಲಿದ್ದಾರೆ. ಸಂಖ್ಯಾಬಲ ಜಾಸ್ತಿಯಾಗುತ್ತಿರುವಂತೆ ತೊಂದರೆಗಳೂ ಜಾಸ್ತಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ನ್ಯಾಯ ಮಂಡಳಿಯ ಮಧ್ಯಸ್ಥಿಕೆಯಲ್ಲಿ ತೊಂದರೆಗಳನ್ನು ಕಡಿಮೆ ಮಾಡಿಸಿ ತೃಪ್ತ್ತಿದಾಯಕ ಜೀವನಕ್ಕೆ ಸ್ಪಂದಿಸೋಣ ಎಂದರು.

ನ್ಯಾಯ ಮಂಡಳಿಯ ನಿಸ್ವಾರ್ಥ ಸೇವೆ ಸಂತೋಷದ ವಿಚಾರ. ಬಂಟ್ಸ್ ಸಂಘ ಮತ್ತು ಬಂಟ್ಸ್ ಅಸೋಸಿಯೇಶನ್ ಈ ಉಭಯ ಸಂಸ್ಥೆಗಳ ಪೂರಕವಾದ ಬೆಂಬಲ ಮಂಡಳಿಗಿದೆ. ಸೌಹಾರ್ದ, ಪ್ರೀತಿ ವಾತ್ಸಲ್ಯದಿಂದ ಜೀವನ ಮೌಲ್ಯಮಾಪನವಾಗುತ್ತಿದ್ದು ಮಂಡಳಿಯು ಸಾಮರಸ್ಯದ ಬಾಳಿಗೆ ಪ್ರೇರಕವಾಗಿ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಸುರೇಂದ್ರ ಶೆಟ್ಟಿ ಹಾರೈಸಿದರು.

ಡಾ| ಸುನೀತಾ ಸನ್ಮಾನಕ್ಕೆ ಉತ್ತರಿಸಿ ರಾಜ್ಯೋತ್ಸವ ಪ್ರಶಸ್ತಿ ನನಗೆ ಬರುವುದಕ್ಕಿಂತ ಮುಂಬಯಿಗೆ ಬಂದಿರುವುದೇ ತುಂಬಾ ಖುಷಿ ತಂದಿದೆ. ಮನುಷ್ಯನಿಗೆ ಸಂಪತ್ತು ಮುಖ್ಯವಲ್ಲ ಬದಲಾಗಿ ಮನುಷ್ಯ ಸಂಬಂಧಗಳು ಮುಖ್ಯ. ನ್ಯಾಯ ತೀರ್ಪುಗಳಲ್ಲಿ ನಾನೂ ಶ್ರಮಿಸಿದ್ದು ಸಂಪತ್ತಿಗಾಗಿ ಸಂಬಂಧಗಳು ಕಳಕೊಳ್ಳುವುದು ಕಂಡು ಬೇಜಾರುವೆಣಿಸುತ್ತದೆ. ಆದರೆ ನಾನಂತೂ ಮುಂಬಯಿಗರ ವಿಶ್ವಾಸ ಸಂಬಂಧದಿಂದ ತೃಪ್ತಿಯುತಳಾಗಿರುವೆ. ಇದೇ ಗೌರವ ನನ್ನ ಪ್ರತಿಷ್ಠೆಗೆ ಆಗಿದೆ ಎಂದರು.

ಕಳೆದ ಎರಡು ವರ್ಷಗಳು ಎಲ್ಲಾ ಸಂಘ ಸಂಸ್ಥೆಗಳಿಗೆ, ಸಮಾಜಕ್ಕೆ, ಇಡೀ ವಿಶ್ವಕ್ಕೆ ಹಾನಿಕಾರ ಸಮಯ. ನಂತರ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ದೇಶವು ೧೫ ವರ್ಷದ ಹಿಂದೆ ಸರಿದಿದ್ದು, ಈ ಕಾಲಾವಧಿಯಲ್ಲಿ ಯೋಚಿಸಿದ್ದ ಯಾವ ಕೆಲಸಗಳೂ ಅಷ್ಟೊಂದು ವಿಶೇಷವಾಗಿ ಮಾಡಲು ಸಾಧ್ಯವಾಗಿಲ್ಲ. ನಮಗೆ ಮಹಾಸಭೆ ಕೂಡ ಮಾಡಲು ಆನಿವಾರ್ಯವಾಯಿತು. ೧೯೯೫ರಲ್ಲಿ ಗಿಡವಾಗಿ ಬೆಳೆದ ಸಂಸ್ಥೆ ಇಂದು ಮರವಾಗಿದೆ. ಇದರ ಪ್ರಯೋಜನ ಅನೇಕ ಮಂದಿಗೆ ಲಭಿಸಿದೆ ಮತ್ತು ಇನ್ನೂ ಲಭಿಸುತ್ತಿದೆ. ನ್ಯಾಯ ಮಂಡಳಿಯ ಕೆಲಸ ಅಷ್ಟು ಸುಲಭ ಕೆಲಸ ಅಲ್ಲ. ಅದಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅದನ್ನು ಪಾರು ಮಾಡಿ ನಮಗೆ ಕೆಲಸ ಮಾಡಬೇಕಾಗುತ್ತದೆ. ಗಡಿ ದಾಟಿ ಕೆಲಸ ಮಾಡಲಿಕ್ಕೆ ಸಾಧ್ಯವಿಲ್ಲ. ಜನರಿಗಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪ್ರಕಾಶ್ ಶೆಟ್ಟಿ ತಿಳಿಸಿದರು.
ನ್ಯಾಯ ಮಂಡಳಿಯ ಉಪ ಕಾರ್ಯದರ್ಶಿ ಪಿ.ಧನಂಜಯ ಶೆಟಿ ವೇದಿಕೆಯಲ್ಲಿ ಆಸೀನರಾಗಿದ್ದು ನ್ಯಾಯ ಮಂಡಳಿಯಲ್ಲಿ ಅವಿರತ ಸೇವೆಗೈದು ಸ್ವರ್ಗೀಯರಾದ ಸೀತರಾಮ ಎಂ.ಶೆಟ್ಟಿ ಮತ್ತು ಸಂಜೀವ ಎಂ.ಶೆಟ್ಟಿ, ಮತ್ತಿತರ ಗಣ್ಯರಿಗೆ ಶ್ರದ್ಧಾಂಜಲಿ ಕೋರಲಾಯಿತು. ಅಧ್ಯಕ್ಷ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ನುಡಿನಮನ ಗೈದರು. ಅಂತೆಯೇ ಮಂಡಳಿಯ ೨೦೨೨-೨೦೨೪ನೇ ಸಾಲಿಗೆ ೧೪ ಮಂದಿ ಆಡಳಿತ ಸಮಿತಿ ಸದಸ್ಯರುಗಳ ಆಯ್ಕೆ ನಡೆಸಲಾಗಿದ್ದು ಅಧ್ಯಕ್ಷರಾಗಿ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅವರು ಸರ್ವಾನುಮತದಿಂದ ಪುನರಾಯ್ಕ್ಕೆಯಾಗಿದ್ದು ಗೌ| ಕಾರ್ಯದರ್ಶಿ ನ್ಯಾಯವಾದಿ ರತ್ನಾಕರ ಶೆಟ್ಟಿ ಯಾದಿ ಪ್ರಕಟಿಸಿದರು. ಸಭಿಕರ ಪರವಾಗಿ ಜಯರಾಮ ಎಸ್.ಮಲ್ಲಿ ಮಾತನಾಡಿ ಮಂಡಳಿಯ ಸೇವೆಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಆಡಳಿತ ಸಮಿತಿ ಸದಸ್ಯರುಗಳಾದ ಎನ್.ಸಿ ಶೆಟ್ಟಿ, ಪಾಂಡುರಂಗ ಶೆಟ್ಟಿ, ಶ್ಯಾಮ ಎನ್.ಶೆಟ್ಟಿ, ಹರೀಶ್ ವಿ.ಶೆಟ್ಟಿ, ಜ್ಯೋತಿ ಆರ್.ಶೆಟ್ಟಿ, ಆಶಾ ಎಸ್.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಲತಾ ಪಿ. ಭಂಡಾರಿ ಪ್ರಾರ್ಥನೆಯನ್ನಾಡಿದರು. ಮಂಡಳಿಯ ಉಪ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಶೆಟ್ಟಿ ಬೋಳ ಸ್ವಾಗತಿಸಿದರು. ಗೌ| ಕೋಶಾಧಿಕಾರಿ ನ್ಯಾಯವಾದಿ ಅಶೋಕ್ ಡಿ.ಶೆಟ್ಟಿ ಗತ ಲೆಕ್ಕಪತ್ರಗಳನ್ನು ಮಂಡಿಸಿದರು. ಗೌ| ಕಾರ್ಯದರ್ಶಿ ನ್ಯಾಯವಾದಿ ರತ್ನಾಕರ ಶೆಟ್ಟಿ ಗತ ವಾರ್ಷಿಕ ಮಹಾಸಭೆಗಳನ್ನು ವಾಚಿಸಿ ವಂದಿಸಿದರು.
