ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಎ.05 ರಂದು ೭ನೇ ತರಗತಿಯವರ ಬೀಳ್ಕೊಡುಗೆ ಕಾರ್ಯಕ್ರಮವಾದ ದೀಪಪ್ರದಾನ ನಡೆಯಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಕಲ್ಲಡ್ಕ ಮಾತನಾಡುತ್ತಾ, “ಇಡೀ ಜಗತ್ತಿನಲ್ಲಿ ಧರ್ಮವನ್ನು ತಿಳಿಸಿಕೊಟ್ಟಂತಹ ದೇಶ ಭಾರತ. ಧರ್ಮದ ದಾರಿಯಲ್ಲಿ ನಡೆಯಬೇಕಾದರೆ, ಅದಕ್ಕೆ ಒಂದಷ್ಟು ಸಂಸ್ಕಾರಗಳು,ಆ ಸಂಸ್ಕಾರವನ್ನು ಹೇಳುವ ಸಂಸ್ಕೃತಿ, ಅದನ್ನು ಸೂಚಿಸುವಂತಹ ಜೀವನ ಮೌಲ್ಯಗಳ ಅವಶ್ಯಕತೆ ಇದೆ.ಆ ಅವಶ್ಯಕತೆಗಳನ್ನು ಈ ವಿದ್ಯಾಸಂಸ್ಥೆಯು ಪೂರೈಸುತ್ತದೆ.
ಇಂದಿನಪೀಳಿಗೆಗೆ ಜೀವನ ಮೌಲ್ಯವನ್ನು ಅರಿತುಕೊಳ್ಳುವ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಕೆಂದ್ರ ಕಾರ್ಯ ನಿರ್ವಹಿಸುತ್ತಿದೆ. ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಬೆಳೆಸುವ ಉದ್ದೇಶ ಈ ವಿದ್ಯಾಸಂಸ್ಥೆ ಹೊಂದಿದೆ. ಈ ರೀತಿಯ ಶಿಕ್ಷಣ ಬೇರೆ ಶಾಲೆಯಲ್ಲಿ ಸಿಗುವುದು ಅಪರೂಪ. ಇವತ್ತಿನ ವಾತಾವರಣಕ್ಕೆ ಪೂರಕವಾದ ಹೊಸ ಹೊಸ ವೈಜ್ಞಾನಿಕ ಸಂಗತಿಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಶಿಕ್ಷಣದ ಮಟ್ಟವನ್ನು ಎತ್ತರಿಸುವ ಕೆಲಸ ಈ ವಿದ್ಯಾಸಂಸ್ಥೆ ಮಾಡುತ್ತಿದೆ.” ಎಂದು ತಮ್ಮ ಅಧ್ಯಕ್ಷತೆಯ ನುಡಿಗಳನ್ನಾಡಿದರು.
ಅತಿಥಿಗಳಿಗೆ ಹೂಗುಚ್ಛ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ನಂತರ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ತೆರಳುವ ೭ನೇ ತರಗತಿಯ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ೬ನೇ ತರಗತಿಯ ವಿದ್ಯಾರ್ಥಿಗಳು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಪುಷ್ಪ ಪ್ರದಾನ ಮಾಡಿ ಆಶೀರ್ವಾದ ಪಡೆದುಕೊಂಡರು. ನಂತರ ೭ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಧ್ಯಾಪಕರಾದ ರಾಜೇಶ್ವರಿ ಎಮ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ನಂತರ ಹಿರಿಯ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯರ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ೬ನೇ ತರಗತಿಯವೈದೇಹಿ ಪ್ರೇರಣಾ ಗೀತೆಯನ್ನು ಹಾಡಿದಳು.
ವೇದಿಕೆಯಲ್ಲಿ ಸುಲ್ಕೇರಿ ಶ್ರೀರಾಮ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಕರಾವಳಿ ಕಲ್ಲು ಗಣಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚದ ಪ್ರಧಾನ ಕಾರ್ಯದರ್ಶಿ ವಿನಿತ್ ಕೋಟ್ಯಾನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್ಎನ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ರಮ್ಯ ನಿರೂಪಿಸಿ, ಅಂಕಿತಾ ಸ್ವಾಗತಿಸಿ, ಅನನ್ಯ ವಂದಿಸಿದರು.
