ಮುಂಬೈ: ಜಿಎಸ್ಬಿ ಸಭಾ ನವಿ ಮುಂಬಯಿ ಇದರ ವಾಶಿ ಇಲ್ಲಿನ ಬಾಲಾಜಿ ಮಂದಿರ ಪ್ರಸಿದ್ಧಿಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಇದರ ಮಠದ ಯತಿ, ಕುಲಗುರು ಶ್ರೀಮದ್ ಸಂಯಮೀoದ್ರ ಶ್ರೀಪಾದರ ಶುಭಾಶೀರ್ವದಗಳೊಂದಿಗೆ ೨೦೨೨ನೇ ವಾರ್ಷಿಕ ವಸಂತೋತ್ಸವ ನೆರವೇರುತ್ತಿದ್ದು ಆ ಪ್ರಯುಕ್ತ ಇಂದಿಲ್ಲಿ ಶನಿವಾರ ಸಂಜೆ ಮಹಾ ಸಹಸ್ರ ಸಮೂಹ ಕುಂಕುಮ ಅರ್ಚನಾ ಸೇವೆ ನೆರವೇರಿಸಲ್ಪಟ್ಟಿತು.
ಈ ಶುಭಾವಸರದಲ್ಲಿ ಮಹಿಳಾ ಸಮಾವೇಶ ಜರುಗಿಸಲಾಗಿದ್ದು, ಅತಿಥಿ ಅಭ್ಯಾಗತರಾಗಿ ನಾಡಿನ ಹೆಸರಾಂತ ಸಮಾಜ ಸೇವಕಿ ಶೆಫಾಲಿ ವೈದ್ಯ ಉಪಸ್ಥಿತರಿದ್ದು ‘ಸಮಾಜದಲ್ಲಿ ಮಹಿಳೆಯರ ಪಾತ್ರ’ ಕುರಿತು ಪ್ರಧಾನ ಭಾಷಣಗೈದರು.
ಮಹಿಳೆಯರು ಸಂಸ್ಕೃತಿಯ ಬೇರುಗಳಾಗಿದ್ದಾರೆ. ಆದ್ದರಿಂದ ವನಿತೆಯರು ಮಕ್ಕಳಲ್ಲಿ ಸಂಸ್ಕೃತಿಯನ್ನು ರೂಪಿಸಬೇಕು. ನಮ್ಮ ಧರ್ಮ, ಸಂಪ್ರದಾಯ, ಪರಂಪರೆಗಳನ್ನು ಬೋಧಿಸಿ ಭವ್ಯ ಭಾರತದ ಸದ್ಪçಜೆಗಳನ್ನಾಗಿಸಬೇಕು. ಯಾವೊತ್ತೂ ತಮ್ಮಲ್ಲಿನ ಸ್ತ್ರೀಶಕ್ತಿಯನ್ನು ಕುಂದಿಸಿಕೊಳ್ಳದೆ ಸಬಲೆಯರಾಗಿ ಶಕ್ತಿಶಾಲಿಗಳಂತೆ ನಡೆದು ಮಕ್ಕಳನ್ನು ಪ್ರೋತ್ಸಹಿಸಬೇಕು ಎಂದು ಸಲಹಿದರು.
ವಸಂತೋತ್ಸವ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಬಿ.ಶೆಣೈ ಮಾತನಾಡಿ ವಸಂತೋತ್ಸವದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಮೇ.೦೧, ರವಿವಾರ ನವಿ ಮುಂಬಯಿ ವಾಶಿಯಲ್ಲಿ ನಡೆಯುವ ವಿಶ್ವ ಸರಸ್ವತ್ ಸಮ್ಮೇಳನದಲ್ಲಿ ಎಲ್ಲಾ ಬಂಧು ಬಾಂದವರು ಭಾಗವಹಿಸಬೇಕಾಗಿ ತಿಳಿಸಿದರು.
ಸಂಯಮೀoದ್ರ ಶ್ರೀಪಾದರು ಪ್ರವಚನಗೈದು ಅನುಗ್ರಹ ನುಡಿಗಳನ್ನಾಡಿದರು. ಧಾರ್ಮಿಕ ಕಾರ್ಯಕ್ರಮವಾಗಿ ಕುಂಕುಮ ಅರ್ಚನ ನಡೆಸಲಾಗಿ ಕುಂಕುಮದೊoದಿಗೆ ಉಪಸ್ಥಿತ ವನಿತೆಯರನ್ನು ಗೌರವಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮ, ಸೇವೆಯಲ್ಲಿ ಸಾವಿರಕ್ಕೂ ಮಿಕ್ಕಿ ಜಿಎಸ್ಬಿ ನಾರಿಯರು ಪಾಲ್ಗೊಂಡು ನವಿ ಮುಂಬಯಿಯ ಇತಿಹಾಸದಲ್ಲೊಂದು ಮೈಲುಗಲ್ಲು ರೂಪಿಸಿದರು.
ಈ ಸಂದರ್ಭದಲ್ಲಿ ಜಿಎಸ್ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್.ಆರ್ ಪೈ, ಮುಖ್ಯ ಸಂಚಾಲಕ ಮೋಹನ್ದಾಸ್ ಮಲ್ಯ, ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ, ಜೊತೆ ಕಾರ್ಯದರ್ಶಿ ಸುರೇಂದ್ರನಾಥ್ ಕಾಮತ್, ವಿಶ್ವಸ್ಥ ಸದಸ್ಯರಾದ ಜಯಂತ ಪ್ರಭು, ನಿತೀನ್ ಪ್ರಭು, ಸಂದೇಶ್ ಕಾಮತ್, ರಾಜೀವ್ ವಾದ್ಯರ್, ಶಿವಾನಂದ ಶೆಣೈ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಇದರ ಜಿಎಸ್ಬಿ ಸಮಾಜದ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ಜಿಎಸ್ಬಿ ಸಭಾ ನವಿ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ಸೀಮಾ ಎಸ್.ಪೈ ಸುಖಾಗಮನ ಬಯಸಿದರು. ಗೌರಿ ಹನುಮಂತ ಭಟ್ ನಮ್ಮ ಸಂಸ್ಕಾರ ಬಗ್ಗೆ ಮಾಹಿತಿ ನೀಡಿದರು.
