ಬಂಟ್ವಾಳ: ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ ೬ರಿಂದ ೧೦ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಇದೇ ೫ರಂದು ಸಂಜೆ ೩.೩೦ ಗಂಟೆಗೆ ಕೊಯಿಲ ಮತ್ತು ಸಿದ್ಧಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಕೊಯಿಲ ಮಾವಂತೂರು ಶ್ರೀ ಮಹಾಗನಪತಿ ದೇವಸ್ಥಾನದಲ್ಲಿ ಕಟೀಲು ಕ್ಷೇತ್ರದ ಕಮಲಪ್ರಸಾದ ಅಸ್ರಣ್ಣ ಮತ್ತು ಸಿದ್ಧಕಟ್ಟೆಯಲ್ಲಿ ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣ ಇವರು ಮೆರವಣಿಗೆಗೆ ಚಾಲನೆ ನೀಡುವರು.
ಇದೇ ವೇಳೆ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಉಗ್ರಾಣ, ಕರ್ಣಾಟಕ ಬ್ಯಾಂಕಿನ ಮಾಜಿ ಸಿಇಒ ಪಿ.ಜಯರಾಮ ಭಟ್ ಪಾಕಶಾಲೆ, ಹೋಟೆಲ್ ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ ಅನ್ನಛತ್ರ ಉದ್ಘಾಟಿಸುವರು. ಸಂಜೆ ಗಂಟೆ ೬ರಿಂದ ಸಾಮೂಹಿಕ ಪ್ರಾರ್ಥನೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೊರೆಕಾಣಿಕೆ ಸಮಿತಿ ಸಂಚಾಲಕ ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.
