ಮಂಗಳೂರು: ತಾಲೂಕಿನ ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಚಿರತೆ ಕಾಟ ಅತಿಯಾಗಿದ್ದು, ನಂದಿನಿ ನದಿಯ ಉಗಮ ಸ್ಥಳ(ಕನಕ ಗಿರಿ) ಕನಕ ಬೆಟ್ಟು ಎಂಬಲ್ಲಿ ದನದ ಕರು ಚಿರತೆಗೆ ಬಲಿಯಾಗಿದೆ. ಇಲ್ಲಿನ ಕರುಣಾಕರ ವನಾಲ್ ಎಂಬವರು ತೋಟದಲ್ಲಿ ಮೇಯಲು ಕಟ್ಟಿದ್ದ ಕರುವನ್ನು ಚಿರತೆ ಕೊಂದು ಹಾಕಿದೆ.
ಕಳೆದ ಹಲವಾರು ತಿಂಗಳುಗಳಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ದಡ್ಡಿ, ಮಂಜಣಕಟ್ಟೆ, ತಿಪ್ಲ ಬೆಟ್ಟು ಮತ್ತು ಕನಕಬೆಟ್ಟು ಪರಿಸರದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ಹಲವು ಸಾಕು ನಾಯಿಗಳು ಚಿರತೆಯ ಪಾಲಾಗಿವೆ ಪರಿಣಾಮವಾಗಿ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಪಂಚಾಯತ್ ನ 6 ರಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿರತೆಯ ಸಂಚಾರ ಕಂಡುಬದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಸ್ಥಳೀಯರು ಮೌಖಿಕವಾಗಿ ದೂರು ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಸಂಚರಿಸುವುದು ಚಿರತೆ ಅಲ್ಲ ಕತ್ತೆಕಿರುಬ ಎಂಬುದನ್ನು ಖಚಿತಪಡಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ದಾಖಲೆ ಸಹಿತ ಲಿಖಿತವಾಗಿ ಅರಣ್ಯ ಇಲಾಖೆಗೆ ದೂರು ನೀಡುವುದಾಗಿ ಪಂಚಾಯತ್ ಅಧ್ಯಕ್ಷ ಹರೀಶ್ ಎಂ. ಹೇಳಿದ್ದಾರೆ. ಈಗಾಗಲೇ ಸಾಕು ನಾಯಿಗಳನ್ನು ಬಲಿ ಪಡೆದಿರುವ ಚಿರತೆ ಕರುವನ್ನು ಬಲಿ ಪಡೆಯುವುದರೊಂದಿಗೆ ಜಾನುವಾರುಗಳತ್ತ ಗಮನಹರಿಸಿದ್ದು ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಶೀಘ್ರ ಚಿರತೆಯನ್ನು ಸೆರೆ ಹಿಡಿಯ ಬೇಕೆಂದು ಅರಣ್ಯ ಇಲಾಖೆಯನ್ನು ಅಗ್ರಹಿಸಿದ್ದಾರೆ.
