ಕಲ್ಲಡ್ಕ: ಫೆ.21ರಂದು ಸೋಮವಾರ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀರಾಮ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಹೇಶ್ವರ ಭಟ್, ಬರೆಪ್ಪಾಡಿ ಮಾತನಾಡುತ್ತಾ, “ಭಾವನೆ ಇಲ್ಲದ ಭಾಷೆಗೆ ಜೀವ ಇಲ್ಲ. ಹೇಗೆ ಉಸಿರಾಡಲು ಗಾಳಿ, ಬಾಯಾರಿಕೆಆದಾಗ ನೀರು ಬೇಕೋ, ಹಾಗೆ ಬದುಕಿಗೆ ಭಾಷೆಯೂ ಮುಖ್ಯ.ನಮ್ಮೊಳಗಿನ ಭಾವನೆ ಹೊರಗೆ ಬರುವುದು ಭಾಷೆಯಿಂದ ಮಾತೃಭಾಷೆ ನಾವು ಹುಟ್ಟಿನಿಂದಲೇ ಕಲಿಯುವಂತದ್ದು, ಆ ಭಾಷೆಯಿಂದಲೇ ಸಂಸ್ಕೃತಿ, ಸಂಸ್ಕಾರ ಕಲಿತು ನಮ್ಮಜೀವನವು ಪರಿಪೂರ್ಣವಾಗುವಲ್ಲಿ ಮಾತೃಭಾಷೆ ಮಹತ್ತರವಾದ ಪಾತ್ರವಹಿಸುತ್ತದೆ. ಹಾಗಾಗಿ ಭಾಷೆ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಭಾಷೆ, ಭಾವನೆ ಹಾಗೂ ಬದುಕು ಒಂದಕ್ಕೊಂದು ಪೂರಕವಾಗಿದೆ. ಭಾಷೆ ಮಾನವನ ಬದುಕಿಗೆ ಜೀವಾಳವಾಗಿದೆ.”ಎಂದು ಮಾತೃಭಾಷೆಯ ಮಹತ್ವವನ್ನು ತಿಳಿಸಿದರು.
ಅತಿಥಿಗಳಿಗೆ ಹೂಗುಚ್ಛ ನೀಡಿಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ೭ನೇ ತರಗತಿಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನಂತರ ಒಂದು ವಾರ ಕಾಲ ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ “ಜ್ಞಾನಧಾರ ಸಪ್ತಾಹ” ಸಪ್ತಾಹಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲಕ ಹಾಗೂ ಹಿರಿಯ ವಿದ್ಯಾರ್ಥಿಯಾದ ದಯಾನಂದ ಚಾಲನೆ ನೀಡಿದರು.
ವೇದಿಕೆಯಲ್ಲಿಕೆ ಎಸ್.ಆರ್.ಟಿ.ಸಿ ಚಾಲಕ ದಯಾನಂದ ಹಾಗೂ ಹಿರಿಯ ವಿದ್ಯಾರ್ಥಿಯಾದ ಅಕ್ಷತಾ ಶೆಣೈ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕೃತಿಕಾ ನಿರೂಪಿಸಿ, ಭರತ್ ವಂದಿಸಿದರು. ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಸ್ವಾಗತಿಸಿದರು.
