ಕೈಕಂಬ: ಗುರುಪುರ ಗೋಳಿದಡಿಗುತ್ತಿನಲ್ಲಿ ಮಂಗಳವಾರ ‘ಗುತ್ತುದ ವರ್ಸೊದ ಪರ್ಬೊ’ ಆರಂಭಗೊಂಡಿದ್ದು, ಈ ಬಾರಿ ಕೋವಿಡ್ ಕಾರಣದಿಂದ ಪರ್ಬವು ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತುಪಡಿಸಿ ವಿಶಿಷ್ಟ ಸಾಂಪ್ರದಾಯಿಕ ಧಾರ್ಮಿಕ ಪೂಜೆಗಳಿಗೆ ಸೀಮಿತವಾಗಿದೆ.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದ ಅವರ ಮಾರ್ಗದರ್ಶನ ಹಾಗೂ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಮೊದಲ ದಿನದ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ೮:೩೦ರಿಂದ ಗಣಪತಿ ಹೋಮ, ಪಾಶುಪತ ಹೋಮ, ಪೂರ್ಣಾಹುತಿ ನಡೆಯಿತು. ಬಳಿಕ ಗೋಳಿದಡಿ ಗುತ್ತಿನ ಚಾವಡಿ ಮಿತ್ರರಿಂದ ಭಜನಾ ಸಂರ್ಕಿರ್ತನೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಕಲ್ಲಂಗಡಿ ಪ್ರಸಾದ, ‘ಬಳೆ’ ಅಭಿಮಾನ :
ಪ್ರತಿವರ್ಷದಂತೆ ಈ ವರ್ಷವೂ ಗುತ್ತಿನ ವರ್ಷದ ಪರ್ಬಕ್ಕೆ ಆಗಮಿಸಿದ ಪ್ರತಿಯೊಬ್ಬ ಭಕ್ತರಿಗೆ ಪ್ರಸಾದ ರೂಪವಾಗಿ ಕಲ್ಲಂಗಡಿ ಹಾಗೂ ಮಹಿಳೆಯರಿಗೆ ಗಾಜಿನ ಬಳೆ ಇಡುವ ಸಂಪ್ರದಾಯ ನಡೆಯಿತು. ಮಹಿಳೆಯರು ಅತ್ಯಾಸಕ್ತಿಯಿಂದ ಹಾಗೂ ‘ಅಂತರ ಕಾಪಾಡಿಕೊಂಡು’ ಬಳೆ ತೊಡಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜ. ೧೯ರಂದು ಬೆಳಿಗ್ಗೆ ಪೂಜಾ ಕಾರ್ಯಕ್ರಮ ಹಾಗೂ ಸಂಜೆ ೪ ಗಂಟೆಯಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿAದ `ರಾಜಾ ಕಾಕತೀಯ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

