ಮುಂಬಯಿ: ನಮ್ಮ ದೇಶದ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಬಹುದೊಡ್ಡದ್ದು. ಪ್ರತಿಯೊಂದು ಭಾಷೆಯಲ್ಲಿ ಉತ್ತಮ ಸಾಹಿತ್ಯವಿದೆ. ಸಾಹಿತ್ಯವೆಂದರೆ ಮನುಷ್ಯನ ವಿಚಾರಗಳು. ಮನುಷ್ಯನ ಸಂತೋಷ, ದುಃಖ, ಬದುಕಿನ ಸಮಸ್ಯೆಗಳ ಆಗರವೇ ಸಾಹಿತ್ಯದಲ್ಲಿ ನಾವು ಕಾಣಬಹುದು. ಭಾಷಾಂತರ ಅಂದರೆ ತ್ರಿಡೈಮನ್ಸ್ ಇದ್ದಹಾಗೆ. ಅನುವಾದವನ್ನು ಭಾಷಾಂತರ, ವಿಸ್ತಾರಿಕರಣ, ಸಂಕ್ಷಿಪ್ತಕರಣ ಹಾಗೂ ವಿಜೃಂಭಣೆ ಈ ಆಯಾಮಗಳಿಂದ ನೊಡಬಹುದು. ಅನುವಾದವು ವಿಜೃಂಭಣೆಹಂತ ಮುಟ್ಟಿದರೆ ಮಾತ್ರ ಅನುವಾದ ಸಾಹಿತ್ಯ ಶ್ರೇಷ್ಠವಾಗುತ್ತದೆ. ಕೇವಲ ಭಾಷಾಂತರ ಮಾಡಿದರೆ ಅದು ಸಾಮಾನ್ಯ ಭಾಷಾಂತರವಾಗುತ್ತದೆ. ಸಾಹಿತ್ಯ ಕೃತಿಯನ್ನು ಅನುವಾದ ಮಾಡುವಾಗ ಮೂಲಕೃತಿಗೆ ಚ್ಯುತಿಯಾಗದಂತೆ ಅನುವಾದಮಾಡಬೇಕು. ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದಿಸುವದು ಅಷ್ಟು ಸುಲಭದ ಕೆಲಸವಲ್ಲ. ಅನುವಾದಕನಿಗೆ ಎರಡು ಭಾಷೆಯ ಸಾಹಿತ್ಯ ಸಂಸ್ಕೃತಿಯ ತಿಳಿವು ಇರಬೇಕು. ಅಂದಾಗ ಒಂದು ಒಳ್ಳೆಯ ಅನುವಾದಕೃತಿ ಕೊಡಲುಸಾಧ್ಯ ಎಂಬುದಾಗಿ ಹಿರಿಯವಿಜ್ಞಾನಿ, ಸಾಹಿತಿ, ಅನುವಾದಕ, ಮರಾಠಿ ಲೇಖಕ, ಪ್ರೊ| ಜಿ.ಸಿ ಕುಲಕರ್ಣಿ ತಿಳಿಸಿದರು.
ಸಾಂತಕ್ರೂಜ್ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್ನ ರಾನಡೆ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಅನುವಾದದ ಅಗತ್ಯ ಮತ್ತು ಮಹತ್ವ ವಿಚಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಪ್ರೊ| ಕುಲಕರ್ಣಿ ಮಾತನಾಡಿದರು.
ಪುಣೆಯಲ್ಲಿ ಕನ್ನಡ ಮರಾಠಿಯ ಸ್ನೇಹ ಸೇತುವೆಯಾಗಿ ಬಹಳ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಮಹಾಕವಿ ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿಯನ್ನು ಮರಾಠಿ ವಾಙ್ಮಯಕ್ಕೆ ನೀಡಿದ ಶ್ರೇಯಸ್ಸು ಹಿರಿಯವಿಜ್ಞಾನಿ, ಸಾಹಿತಿ, ಅನುವಾದಕ ಪ್ರೊ| ಜಿ.ಸಿ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಮೂಲತಃ ರಸಾಯನ ಶಾಸ್ತ್ರದ ಪ್ರಾಧ್ಯಾಪಕರು. ಸುಮಾರು ೮೦ಕ್ಕಿಂತ ಹೆಚ್ಚು ಆಂಗ್ಲ ಕೃತಿಗಳನ್ನು ವಿಜ್ಞಾನಿ ವಿಷಯದಲ್ಲಿ ರಚಿಸಿದ ಹಿರಿಮೆ ಅವರದ್ದು. ಕನ್ನಡದ ಬಹುಮುಖ್ಯ ಕೃತಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ ಎನ್ ಉಪಾಧ್ಯ ಪ್ರಾಸ್ತಾವಿಕ ಮಾತುಗಳಲ್ಲಿ ಅಭಿಪ್ರಾಯಪಟ್ಟರು.
ಡಾ| ರಮಾ ಉಡುಪ ಅವರು ತಮ್ಮ ಲಂಡನ್ ಪ್ರವಾಸದ ಅನುಭವದ ಕಥನವನ್ನು ಬಹಳ ಸೊಗಸಾಗಿ ಮಂಡಿಸಿದರು. ಶೈಲಜಾ ಹೆಗಡೆ, ಸವಿತಾ ಅರುಣ್, ಕುಮುದಾ ಆಳ್ವ ಮೊದಲಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಕಲಾಭಾಗವತ್ ಅವರು ಕುಮಾರವ್ಯಾಸನ ಗಮಕ ವಾಚನವನ್ನು ಮಾಡಿದರು. ಪ್ರತಿಭಾ ರಾವ್ ಹಾಗೂ ಅನಿತಾ ಪಿ.ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ದುರ್ಗಪ್ಪ ಯು.ಕೋಟಿಯವರ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಹೆಗಡೆ ವಂದನಾರ್ಪಣೆಗೈದರು.
