ಕೈಕಂಬ : ಪುಟ್ಟ ಹೆಣ್ಣು ಮಗುವನ್ನು ಕೊಂದಿರುವ ದುರುಳರಿಗೆ ಶೀಘ್ರ ಕಠಿಣ ಶಿಕ್ಷೆಯಾಗಬೇಕು. ಅಂತಹವರಿಗೆ ಗಲ್ಲು ಶಿಕ್ಷೆಯಾಗಬೇಕು. ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಬಂದು ಅಪರಾಧಿಗಳ ಮೇಲೆ ಎನ್ಕೌಂಟರ್ ನಡೆಸಿದರೂ ಕಡಿಮೆಯೇ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಗುಡುಗಿದರು.

ಅವರು ಮಂಗಳವಾರ ಸಂಜೆ ಪರಾರಿ ದ್ವಾರದೆದುರು ಮಂಗಳೂರು, ವಾಮಂಜೂರು, ಉಳಾಯಿಬೆಟ್ಟು, ಗುರುಪುರ ನಾಗರಿಕರು ನಡೆಸಿದ ಶ್ರದ್ಧಾಂಜಲಿ ಮತ್ತು ಬೃಹತ್ ಪ್ರತಿಭಟನಾ ಸಭೆಯಲ್ಲಿ ಸ್ವಾಮೀಜಿಯವರು ಮಾತನಾಡಿದರು.
ಗುರುಪುರಕ್ಕೆ ಹತ್ತಿರದ ಪರಾರಿಯಲ್ಲಿರುವ ಹೆಂಚಿನ ಕಾರ್ಖಾನೆಯಲ್ಲಿ ಗುತ್ತಿಗೆಯಾಧರಿಸಿ ಕೆಲಸ ಮಾಡುತ್ತಿರುವ ಉತ್ತರ ಭಾರತೀಯ ಕುಟುಂಬವೊAದರ ೮ ವರ್ಷದ ಹೆಣ್ಣು ಮಗುವನ್ನು ಭಾನುವಾರ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದು ನೀರಿನ ಮೋರಿಯೊಳಗೆಸೆದ ಘಟನೆಯನ್ನು ಖಂಡಿಸಿದರು.
ಈ ಘಟನೆ ಬಳಿಕ ನಮ್ಮೂರ ಮಕ್ಕಳಿಗೆ ತಿರುಗಾಡಲು ಹೆದರಿಕೆ ಉಂಟಾಗಿದೆ. ಕೆಲಸ ಹುಡುಕಿಕೊಂಡು ಗ್ರಾಮೀಣ ಪ್ರದೇಶಗಳಿಗೆ ಆಗಮಿಸುವ ಹೊರ ರಾಜ್ಯಗಳ ಕೆಲಸಗಾರರ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರು ತೀವ್ರ ತೆರನಾದ ನಿಗಾ ಇರಿಸುವ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್, ಹರೀಶ್ ಮೂಡುಶೆಡ್ಡೆ ಮಾತನಾಡಿದರು. ಮಗುವಿನ ಭಾವಚಿತ್ರಕ್ಕೆ ಹಣತೆ ದೀಪ ಹಚ್ಚಿ ನಾಗರಿಕರು ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರು, ಗುರುಪುರ, ಮೂಡುಶೆಡ್ಡೆ, ಉಳಾಯಿಬೆಟ್ಟು ಗ್ರಾಮ ಪಂಚಾಯತ್ಗಳ ಸದಸ್ಯರು ಮತ್ತು ವಾಮಂಜೂರು, ಗುರುಪುರ, ಉಳಾಯಿಬೆಟ್ಟು ಹಾಗೂ ಸುತ್ತಲ ಪ್ರದೇಶದ ನೂರಾರು ಮಹಿಳೆಯರು, ಮಕ್ಕಳು, ಹಿರಿಯರು ಪಾಲ್ಗೊಂಡಿದ್ದರು.
