ಮೂಡುಬಿದಿರೆ: 66ನೇ ಕರ್ನಾಟಕ ರಾಜ್ಯೋತ್ಸವದ ‘ಕನ್ನಡಕ್ಕಾಗಿ ನಾವು’ ಅಭಿಯಾನಕ್ಕೆಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಿಂದ ಐದು ಸಾವಿರ ಮಂದಿ ಕನ್ನಡನಾಡಿನ ಹಾಡುಗಳನ್ನು ಹಾಡಿದರು. ಪುತ್ತಿಗೆ, ಮಿಜಾರಿನಲ್ಲಿರುವ ಆಳ್ವಾಸ್ ಕ್ಯಾಂಪಸ್ ಹಾಗೂ ವಿದ್ಯಾಗಿರಿ ನುಡಿಸಿರಿ ವೇದಿಕೆಯಲ್ಲಿ ವಿದ್ಯಾರ್ಥಿಗಳು ಹಾಡಿದರು.
4 ಪ್ರತ್ಯೇಕ ಸ್ಥಳಗಳಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಂದ, ಕೆ.ವಿ ರಮಣ್ ನಿರ್ದೇಶನದಲ್ಲಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳು ಏಕಕಾಲದಲ್ಲಿ ಹಾಡಿದರು. ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಎಲ್ಲಾ ವಿದ್ಯಾರ್ಥಿಗಳು ಕನ್ನಡ ಬಾವುಟವನ್ನು ಬೀಸುವ ಮೂಲಕ, ತಮ್ಮ ಕನ್ನಡದ ಅಭಿಮಾನವನ್ನು, ಕನ್ನಡ ನಾಡಿನ ಮೇಲಿರುವ ಪ್ರೀತಿಯನ್ನು ತೋರ್ಪಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಕನ್ನಡನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಕನ್ನಡದಲ್ಲೇ ಮಾತನಾಡುತ್ತೇವೆ, ಕನ್ನಡದಲ್ಲೇ ಬರೆಯುತ್ತೇವೆ, ಕನ್ನಡದಲ್ಲೇ ನಿತ್ಯ ವ್ಯವಹಾರ ಮಾಡುವುದಾಗಿ ಪಣತೊಡುತ್ತೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧರಾಗಿರುತ್ತೇವೆ ಎಂದು ಸಂಕಲ್ಪ ಮಾಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
