ಮುಂಬಯಿ : ಕರಾವಳಿ ಕರ್ನಾಟಕದ ಕಾರ್ಕಳದಲ್ಲಿ ಆರ್ಥಿಕವಾಗಿ ಕಡು ಬಡತನದ ಹೊಂದಿದ್ದ ಕುಟುಂಬದಲ್ಲಿ ಪ್ರತಿಭಾ ಸಿರಿವಂತಳಾಗಿ ಹುಟ್ಟಿದ ಹರಿಣಿ ನಿಲೇಶ್ ಪೂಜಾರಿ ಇಂದು ನಾಡಿನ ಲಕ್ಷಾಂತರ ಜನರ ಮನ ಗೆದ್ದಿರುವ ಮುಂಬಯಿ ಬೆಡಗಿ. ಪ್ರಸ್ತುತ ಮುಂಬಯಿ ವಾಸಿ ಆಗಿರುವ ಈಕೆ ೨೦೨೧ರ ನವರಾತ್ರಿ ಸಂದರ್ಭದಕ್ಕೆ ಶಾರದೆ ಮಾತೆಯ ರೂಪ ಪಡೆದು ಮಾಡಿಸಿದ ಫೋಟೋಶೂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರ ೨೧ ದಿನಗಳ ಕಟ್ಟುನಿಟ್ಟಿನ ವೃತ ಆಚರಿಸಿ ಫೋಟೋಶೂಟ್ ಮಾಡಿಸಿ ಶಾರದಾಂಭೆ ರೂಪಿತರೆಣಿಸಿ ಮಾತೆಯ ಅನುಗ್ರಹಕ್ಕೆ ಪಾತ್ರರಾಗಿರುವ ಹರಿಣಿ ದೇವಿ ಸ್ವರೂಪಿಣಿಯಾಗಿ ಕಾಣಿಸುತ್ತಾ ತನ್ನ ಪ್ರತಿಭಾನ್ವೇಷಣಾ ಕಿರೀಟಕ್ಕೆ ಮತ್ತೊಂದು ಮಾಣಿಕ್ಯವನ್ನು ಹೆಚ್ಚಿಸಿ ಕೊಂಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಇಲ್ಲಿನ ಬಜಗೋಳಿ ಇಲ್ಲಿನ ರಘುನಾಥ್ ಸುವರ್ಣ ಮತ್ತು ಶೋಭಾ ದಂಪತಿಯ ಸುಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿರುವ ತರುಣಿ. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದ ಪದವಿಪೂರ್ವ (೧೨ನೇ) ವಿದ್ಯಾಭ್ಯಾಸದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ.
ಮುಂದೆ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ಎಂಕಾಂ ಪದವೀಧರೆಯಾದ ಹರಿಣಿ ಹೆಜ್ಜೆಯನ್ನಿರಿಸಿದ್ದು ಕಲಾಜಗತ್ತಿಗೆ. ಆವತ್ತಿನ ನಂಬರ್ ಒನ್ ಕನ್ನಡ ಕಾಮಿಡಿ ಸೀರಿಯಲ್ ಪಂಚರಂಗಿ ಪೊಂ ಪೊಂ ಇದರ ಸಾವಿರ ಸಂಚಿಕೆಗಳಲ್ಲಿ ಅಭಿನಯಿಸಿದ ಕೀರ್ತಿ ಹರಿಣಿ ನಾರಿದ್ದು. ಮುಂದೆ ಹರಿಣ ಚಿತ್ತಾಕರ್ಷಣೆ, ವೇಗದ ಹರಿಣಿ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಅಭಿನಯಿಸಿದ ಸರಸ್ವತಿ ದೇವಿ ಪಾತ್ರದಿಂದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದರು. ಮದುಬಾಲ, ಲಕ್ಷ್ಮಿ ಬಾರಮ್ಮ, ಮದುಮಗಳು ಹೀಗೆ ಸಾಲು ಸಾಲು ಧಾರಾವಾಹಿಗ ಳಲ್ಲಿ ಹರಿಣಿ ಮಿಂಚಿದರು. ಕಂಚಿಲ್ದಾ ಬಾಲೆ ತುಳು ಸಿನಿಮಾದಲ್ಲಿ ಬಾಲಮಾಣಿಯಾಗಿ ಅಭಿನಯಿಸಿ ತುಳು ಚಿತ್ರ ರಸಿಕರಿಗೆ ಮಾತ್ರವಲ್ಲದೆ ಆಧ್ಯಾತ್ಮಿಕ ಉಪಾಸಕರಿಗೂ ಸಮೀಪಿಗರಾದರು. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾದ ಅರ್ಜುನ್ ವೆಡ್ಸ್ ಅಮೃತ ತುಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಸುವರ್ಣ ಸೂಪರ್ ಜೋಡಿ, ಡ್ರೀಮ್ ಗರ್ಲ್್ಸ ಹಾಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದರು. ಬೆಸ್ಟ್ ಕಾಮಿಡಿ ಆಕ್ಟೆçಸ್ಸ್, ಬೆಸ್ಟ್ ಪರ್ಫಾರ್ಮೆನ್ಸ್, ಹೀಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಹರಿಣಿಯ ಪ್ರತಿಭಾನ್ವೇಷಣೆಯ ಮುಡಿಗೇರಿದವು.
೨೦೧೮ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ನೆರೆ ಸಂದರ್ಭದಲ್ಲಿ ಸ್ವಯಂ ಸೇವಕಿಯಾಗಿ ಸೇವೆ ನಿರ್ವಹಿಸಿ ಮಾನವೀಯತೆ ಮೆರೆದು ಮೆಚ್ಚುಗೆ ಪಡೆದಿದ್ದ ಈಕೆ ಓರ್ವ ಸಮಾಜ ಸೇವಕಿ. ಮುಂಬಯಿಯಲ್ಲಿನ ಯುವೋದ್ಯಮಿ ನಿಲೇಶ್ ಪೂಜಾರಿ ಪಲಿಮಾರು ಅವರ ಬಾಳಸಂಗಾತಿ ಆಗಿ ಅಮ್ಮನ ಸ್ಥಾನವನ್ನಲಂಕರಿಸಿದ ಹರಿಣಿ ತಮ್ಮ ಮಗಳು ಸಹನಿ ಈಕೆಯ ಮೊದಲ ವರ್ಷದ ಹುಟ್ಟುಹಬ್ಬವನ್ನ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಆದರ್ಶ ಗೃಹಿಣಿ ಎಂದೆಣಿಸಿದ್ದಾರೆ.
ಸದ್ಯಕ್ಕೆ ಕಲಾಜಗತ್ತಿನಿಂದ ದೂರವಿದ್ದರೂ ಕೂಡ ಸಾಮಾಜಿಕ ಸೇವೆಯಲ್ಲಿ ತಮ್ಮನ್ನ ತಾವು ನಿರಂತರವಾಗಿ ತೊಡಗಿಸಿ ಕೊಂಡಿದ್ದಾರೆ. ಜೊತೆಗೆ ಬರವಣಿಗೆಯಲ್ಲಿಯೂ ತನ್ನ ಛಾಪನ್ನ ಮೂಡಿಸುತ್ತಾ ಓದುಗರ ಮನವನ್ನು ಅಲಂಕರಿಸಿದ್ದಾರೆ. ತನ್ನ ಯಶಸ್ಸಿಗೆ ಸ್ಫೂರ್ತಿಯಾದ ಅಪ್ಪ, ಅಮ್ಮ ಅಣ್ಣ ಹರಿಪ್ರಸಾದ್, ತಮ್ಮ ನಿತೇಶ್ ಮತ್ತು ಪತಿ ನಿಲೇಶ್ ಸಹಕಾರಕ್ಕೆ ಅಭಾರಿಯಾಗಿರುವ ಹರಿಣಿ ಸದ್ಯ ಸಹನಿ ಸ್ಟಾರ್ ಎಂಬ ಹೆಸರಿನ ಸಂಸ್ಥೆಯ ಮುಖ್ಯಸ್ಥೆ ಆಗಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಇಂಗಿತ ಹೊಂದಿದ್ದಾರೆ.
