ಕೋಲಾರ: ತೋಟಗಾರಿಕಾ ಬೆಳೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪ್ರಾವೀಣ್ಯತೆ ಪಡೆದಿರುವ ಜಿಲ್ಲೆಯ ರೈತರು ರಸಾಯನಿಕ ಗೊಬ್ಬರ,ಕೀಟನಾಶಕ ಮುಕ್ತ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಈ.ಪಾಟೀಲ ಕರೆ ನೀಡಿದರು. ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತ್ತಮಂಗಲದಲ್ಲಿ ವಿಕ್ರಮ್ ವಿಶ್ವನಾಥ್ ಅವರ ವಿಕ್ರಮ್ಫಾರಂಗೆ ಇಂದು ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಸಾವಯವ ಕೃಷಿ ಪದ್ದತಿಗಳನ್ನು ವೀಕ್ಷಿಸಿ ಮಾತನಾಡುತ್ತಿದ್ದರು.
ಸಾವಯವ ಕೃಷಿಯ ಮೂಲಕ ಭೂಮಿಯ ಗುಣಮಟ್ಟ ಕಾಪಾಡುವ ಅಗತ್ಯವಿದೆ, ಭೂಮಿಯನ್ನು ರಸಾಯನಿಕ ವಸ್ತುಗಳಿಂದ ನಾಶ ಮಾಡದೇ ಸಾವಯವ ವಿಧಾನದ ಮೂಲಕ ಮತ್ತಷ್ಟು ಫಲವತ್ತುಗೊಳಿಸುವ ಕಾರ್ಯ ಇಂದು ನಡೆಯಬೇಕಾಗಿದ್ದು, ಸರ್ಕಾರ ಸಾವಯವ ಕೃಷಿಗೆ ಒತ್ತು ನೀಡಿದೆ ಎಂದರು. ಕೋಲಾರ ಜಿಲ್ಲೆಯ ರೈತರು ಅತ್ಯಂತ ಕಷ್ಟಜೀವಿಗಳು, ಪಾತಾಳದಿಂದ ನೀರು ಬಗೆದು ಅತ್ಯುತ್ತಮ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಇಲ್ಲಿನ ಟಮೋಟೋ, ಆಲುಗಡ್ಡೆ ಮತ್ತಿತರ ತರಕಾರಿ ವಿದೇಶಗಳಿಗೂ ರಫ್ತಾಗುತ್ತಿದ್ದು, ರೈತರಿಗೆ ಮತ್ತಷ್ಟು ಸೌಲಭ್ಯಗಳ ಅಗತ್ಯವಿದೆ ಎಂದರು.
ವಿಕ್ರಮ್ ಫಾರಂನಲ್ಲಿನ ಸಿದ್ದಿಹಲಸು ತಳಿ, ನಿಂಬೆ, ಅವಕಾಡು, ಮಾವು, ನೇರಳೆ, ನುಗ್ಗೆ, ತೆಂಗು ತೋಟಗಳನ್ನು ವೀಕ್ಷಿಸಿದ ಅವರು, ಇಲ್ಲಿ ನಿರ್ಮಿಸಿರುವ ನವಗ್ರಹ ಉದ್ಯಾನ, ಔಷಧ ವನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶಿತಳಿ ಹಸು ಸಂರಕ್ಷಣೆ ಅಗತ್ಯ ವಿಕ್ರಮ್ ಫಾರಂನಲ್ಲಿ ೧೦ಕ್ಕೂ ಹೆಚ್ಚು ದೇಶಿ ತಳಿ ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವುದನ್ನು ವೀಕ್ಷಿಸಿದ ಶಂಕರಗೌಡ ಈ ಪಾಟೀಲ ಅವರು, ಸರ್ಕಾರ ಗೋಹತ್ಯೆ ನಿಷೇಧದ ಮೂಲಕ ಜೀವನವಿಡೀ ಹಾಲು ನೀಡಿ ತಾಯಿಯಂತೆ ಪೋಷಿಸುವ ಗೋವನ್ನು ಉಳಿಸುವ ಕಾರ್ಯ ಮಾಡಿದೆ, ಜತೆಗೆ ಇಂದು ಮಿಶ್ರತಳಿ ಹಸುಗಳಿಂದ ಉತ್ತಮ ಹಾಲಿನ ಉತ್ಪಾದನೆ ಸಾಧ್ಯವಾಗಿದೆ ಆದರೆ ನಮ್ಮ ದೇಶಿತಳಿಗಳನ್ನು ಉಳಿಸುವ ಅಗತ್ಯವಿದೆ ಎಂದರು.
ಮೂಲತಃ ದೇವರಾಜಸಮುದ್ರದವರಾದ ವಿಕ್ರಮವ ವಿಶ್ವನಾಥ್ ಪೆರು ದೇಶದ ಗೌರವ ಕನ್ಸುಲೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಸಾವಯವ ಫಾರಂ ಉಸ್ತುವಾರಿಗೆ ರವಿಕುಮಾರ್ ಎಂಬುವವರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಫಾರಂನಲ್ಲಿನ ಗೋತಳಿಗಳ ಕುರಿತು ಶಂಕರಗೌಡ ಈ ಪಾಟೀಲ ಅವರಿಗೆ ಮಾಹಿತಿ ನೀಡಿದ ಅವರು, ೧೦ ರೀತಿಯ ಗೋತಳಿ ಇಲ್ಲಿದ್ದು, ಅವುಗಳ ಹಾಲನ್ನು ಕರುಗಳಿಗೆ ಬಿಡಲಾಗಿದೆ, ಕರುಗಳು ತಮಗೆ ಅಗತ್ಯವಾದಷ್ಟು ಕುಡಿದು ಬಿಟ್ಟ ಹಾಲನ್ನು ಮಾತ್ರ ನಮ್ಮ ಬಳಕೆಗೆ ಕರೆಯಲಾಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕಿ ಭವ್ಯರಾಣಿ, ಮುಳಬಾಗಿಲು ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ, ಪಾಟೀಲರಿಗೆ ಕೋಲಾರ ಜಿಲ್ಲೆಯ ಕೃಷಿ ಪದ್ದತಿಗಳು, ಇಲ್ಲಿ ಬೆಳೆಯುವ ಬೆಳೆಗಳ ಕುರಿತು ಮಾಹಿತಿ ನೀಡಿದರು.
ಗ್ರಾಮಪಂಚಾಯಿತಿ ಆತ್ಮೀಯ ಸನ್ಮಾನ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಶಂಕರಗೌಡ ಈ ಪಾಟೀಲ ಅವರನ್ನು ಹನುಮನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಿದ್ದು, ಗ್ರಾ.ಪಂ ಅಧ್ಯಕ್ಷ ಬಿ.ಕೆ.ಮೋಹನ್,ಪಿಡಿಒ ಮಹದೇವಪ್ಪ ಪೂಜಾರ್, ಸದಸ್ಯರಾದ ಸುಬ್ರಮಣಿ, ಪರಿಸರಪ್ರೇಮಿ ತ್ಯಾಗರಾಜ್ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಮುಳಬಾಗಿಲು ಜಿಪಂ ಮಾಜಿ ಸದಸ್ಯ ಉತ್ತನೂರು ಶ್ರೀನಿವಾಸ್, ತಹಸೀಲ್ದಾರ್ ರಾಜಶೇಖರ್, ಕಂದಾಯ ನಿರೀಕ್ಷಕ ಸುಬ್ರಮಣಿ, ತೋಟದ ಉಸ್ತುವಾರಿ ನೋಡಿಕೊಳ್ಳುವ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತ್ತಮಂಗಲದಲ್ಲಿ ವಿಕ್ರಮ್ ವಿಶ್ವನಾಥ್ ಅವರ ವಿಕ್ರಮ್ಫಾರಂಗೆ ಇಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಈ.ಪಾಟೀಲ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಸಾವಯವ ಕೃಷಿ ಪದ್ದತಿಗಳನ್ನು ವೀಕ್ಷಿಸಿದರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತ್ತಮಂಗಲಕ್ಕೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಈ.ಪಾಟೀಲರನ್ನು ಹನುಮನಹಳ್ಳಿ ಗ್ರಾ.ಪಂ.ನಿಂದ ಸನ್ಮಾನಿಸಲಾಯಿತು.
