ಕೋಲಾರ: ಜಾತಿ ಮತ್ತು ಧರ್ಮಾತೀತವಾಗಿ ಪ್ರತಿಯೊಬ್ಬರು ಸಹ ನಡೆದುಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾದ ನಾಡ ಪ್ರಭು ಕೆಂಪೇಗೌಡರ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಜೂ.೨೭ ರಂದು ಸಮಾಜ ಸೇವಕ ಹಾಗೂ ಸಿಎಂಆರ್ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದ ಹೊರವಲಯದ ಎಪಿಎಂಸಿ ಸಭಾಂಗಣದಲ್ಲಿ ಕೆಂಪೇಗೌಡರ ಬಳಗದಿಂದ ನಡೆದ ನಾಡಪ್ರಭು ಕೆಂಪೇಗೌಡರ ೫೧೨ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೊಳಿಸಿ ಮಾತನಾಡಿ, ಸರ್ವಧರ್ಮ ಸಮನ್ವಯಕಾರ ಕೆಂಪೇಗೌಡರು ೫೦೦ ವರ್ಷಗಳ ಹಿಂದೆಯೇ ಜಾತಿಗೊಂದು ಪೇಟೆಯನ್ನು ತೆರೆಯುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಬಲಗೊಳಿಸುವುದರೊಂದಿಗೆ ಎಪಿಎಂಸಿ ವ್ಯವಸ್ಥೆ ಬಲಗೊಳ್ಳಲು ಕಾರಣೀಭೂತರಾಗಿದ್ದಾರೆಂದು ಸ್ಮರಿಸಿದರು. ಪ್ರಾಚೀನ ಕಾಲದ ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ನಾಡುಪ್ರಭು ಕೆಂಪೇಗೌಡರು ದೃಷ್ಟಿಯಲ್ಲಿ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕದ ರಾಜ್ಯದ ರಾಜಧಾನಿಯಾಗಿ ವಿಶ್ವಮಟ್ಟದಲ್ಲಿ ಹೆಸರುಗಳಿಸಲು ಪ್ರಮುಖ ಪಾತ್ರ ವಹಿಸಿ ದೊಡ್ಡ ಸಾಧನೆಗೆ ಶ್ರಮ ಅಪಾರವಾಗಿದೆ ಎಂದರು.
ಕೆಂಪೇಗೌಡರ ಸಾಧನೆಯಲ್ಲಿ ಯುವ ಜನಾಂಗ ಸಾಗುವ ಮೂಲಕ ಸಾಧನೆಯ ಪಥದತ್ತ ಹೆಜ್ಜೆ ಹಾಕಿ ರಾಜ್ಯ ಹಾಗೂ ದೇಶವನ್ನು ವಿಶ್ವ ಮಟ್ಟದಲ್ಲಿ ಖ್ಯಾತಿಗೊಳುವ ಕಡೆಗೆ ಯುವಕರು ಮುಖ ಮಾಡಬೇಕು ಎಂದರು. ಕರೋನಾದಿಂದ ಎರಡು ವರ್ಷದಿಂದಲೂ ಆಚರಣೆ ಸರಳವಾಗಿದ್ದು ಇದೀಗ ೩ನೇ ಅಲೆ ಭೀತಿಯನ್ನು ಎದುರಿಸುತ್ತಿರುವುದರಿಂದಾಗಿ ಎಪಿಎಂಸಿ ವ್ಯಾಪಾರಿಗಳು, ಮಂಡಿ ಮಾಲೀಕರು, ದಲ್ಲಾಳರು ಎಚ್ಚರಿಕೆ ವಹಿಸುವ ಮೂಲಕ ಕೋವಿಡ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಟಮಕ ವೆಂಕಟೇಶ್ ಮಾತನಾಡಿ, ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೇಸರ್ ಬಳಕೆ ಮೂಲಕ ೩ನೇ ಅಲೆಯನ್ನು ತಪ್ಪಿಸುವುದರೊಂದಿಗೆ ಮಕ್ಕಳ ಪ್ರಾಣ ಉಳಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಪುಟ್ಟರಾಜ್, ಕೆಆರ್ಬಿ ಬೈಚಣ್ಣ, ಕೆಂಚೇಗೌಡ, ಬಿವಿಜಿ ವೆಂಕಟೇಶ್ಗೌಡ, ಕೆಎಸ್ಎಂ ರಾಮಸ್ವಾಮಿ, ಎಂಎನ್ಆರ್ ಮಂಜುನಾಥರೆಡ್ಡಿ, ಆರ್ಎನ್ಜಿ ನಾಗೇಶ್ ಗೌಡ, ವಿಸಿಎಂ ಸೀನಣ್ಣ, ಎಸ್ಎಂಸಿ ವೆಂಕಟೇಶ್, ಎಸ್ಎಎಂ ಅಮರೇಶ್, ವಿಶ್ವನಾಥ್ಮೂರ್ತಿ, ಶ್ರೀನಿವಾಸ್ ಇದ್ದರು.
