ಕೈಕಂಬ ಅಂಗಡಿ ಮುಂಗಟ್ಟು ಬಂದ್
ಕೈಕಂಬ : ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಗುರುಪುರ-ಕೈಕಂಬ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜೂ. ೩ರಿಂದ ೭ರವರೆಗೆ ಕರೆದಿರುವ ಅಂಗಡಿ ಮುಂಗಟ್ಟು ಬಂದ್ ಕರೆಗೆ ಶುಕ್ರವಾರ ಕೈಕಂಬ, ಗಂಜಿಮಠ ಮತ್ತು ಕಂದಾವರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಗುರುಪುರ ಮತ್ತು ಅಡ್ಡೂರು ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೈಕಂಬದಲ್ಲಿ ಕೆಲವೊಂದು ಅಂಗಡಿಗಳು ಬೆಳಿಗ್ಗೆ ಒಂದು ತಾಸು ತೆರೆದಿದ್ದವು. ಬಳಿಕ ಮೆಡಿಕಲ್ ಶಾಪ್, ಬ್ಯಾಂಕ್ ಹಾಗೂ ಹಾಲು ಮಾರಾಟದಂಗಡಿ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಗಂಜಿಮಠ ಮತ್ತು ಕಂದಾವರ ಗ್ರಾಪಂ ವ್ಯಾಪ್ತಿಯಯಲ್ಲಿ ಅಂಗಡಿ ಮುಂಗಟ್ಟು ಬೆಳಿಗ್ಗಿನಿಂದಲೇ ಸಂಪೂರ್ಣ ಬಂದ್ ಆಗಿತ್ತು.
ಕೈಕಂಬದಲ್ಲಿ ಬೆಳಿಗ್ಗೆಯಿಂದಲೇ ಶುಕ್ರವಾರ ಬಂದ್ ಪ್ರದೇಶದಲ್ಲಿ ಅಡ್ಡಾದಿಡ್ಡಿ ಸುತ್ತಾಡುವ ಜನರ ಸಂಖ್ಯೆ ತೀರಾ ಇಳಿಮುಖವಾಗಿತ್ತು.
ಇದೊಂದು ರಾಜಕೀಯ ಪ್ರೇರಿತ ಬಂದ್ ಎಂದು ಬಣ್ಣಿರುವ ಗುರುಪುರ ಮತ್ತು ಅಡ್ಡೂರಿನ ವರ್ತಕರು ತಾವು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಕಟಿಸಿರುವ ಲಾಕ್ಡೌನ್ ಬೆಂಬಲಿಸುತ್ತೇವೆ ಎಂದಿದ್ದು, ಇಲ್ಲೆಲ್ಲ ಎಂದಿನಂತೆ ಬೆಳಿಗ್ಗೆ ೬ರಿಂದ ೧೦ ಗಂಟೆಯವರೆಗೆ ಅಂಗಡಿಗಳು ತೆರೆದಿದ್ದವು.