ಕೈಕಂಬ: ಮಂಗಳೂರು ತಾಲೂಕಿನ ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ವರ್ಷಗಳಿಂದ ಹಡೀಲು ಬಿದ್ದಿರುವ ಸುಮಾರು 172 ಹೆಕ್ಟೇರು ಕೃಷಿ ಭೂಮಿಯಲ್ಲಿ ಸರ್ಕಾರದ ಕೃಷಿ ನೀತಿಯಾದ `ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಕಾರ್ಯಕ್ರಮದಡಿ ಗುರುವಾರ ಗಂಜಿಮಠ ಗ್ರಾಮ ಪಂಚಾಯತ್ ಹಾಗೂ ಕೃಷಿ ಇಲಾಖೆ ಮಂಗಳೂರು ಸಹಯೋಗದಲ್ಲಿ ರೈತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ಒಟ್ಟು 263 ಹೆಕ್ಟೇರು ಹಡೀಲು ಭೂಮಿ ಗುರುತಿಸಲಾಗಿದ್ದು, 172 ಹೆಕ್ಟೇರು ಭೂಮಿ ಮರುಕೃಷಿಗೆ ಅನುಕೂಲವಾಗಿದೆ. ಕೃಷಿ ಭೂಮಿ ಹಡೀಲು ಬಿಡದೆ ಭೂಮಾಲಕರು ಕೃಷಿ ಮಾಡಬೇಕು,
ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಸರ್ಕಾರವೇ ಹಡೀಲು ಭೂಮಿಯಲ್ಲಿ ಕೃಷಿ ನಡೆಸಲಿದೆ. ಇದಕ್ಕಿಂತ ಪೂರ್ವದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೃಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಭೌಗೋಳಿಕ ಅನುಕೂಲಕ್ಕೆ ತಕ್ಕಂತೆ ಭತ್ತ ಅಥವಾ ಪರ್ಯಾಯ ಬೆಳೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಹಡೀಲು ಭೂಮಿ ಇತರರಿಗೆ ನೀಡಿದರೆ ಭೂಮಿ ಕೈತಪ್ಪಿ ಹೋಗುವ ಸಾಧ್ಯತೆ ಭೀತಿ ಬೇಡ. ಇನ್ನಾದರೂ ಸರ್ಕಾರದ ಪ್ರಯೋಜನ ಪಡೆದು ಕೃಷಿ ಮಾಡಲು ಭೂಮಾಲಕರಿಗೆ ಅವಕಾಶವಿದೆ. ಇಲ್ಲವಾದಲ್ಲಿ ಗ್ರಾಮ ಮಟ್ಟದಲ್ಲಿ ಸೂಚಿಸಲ್ಪಡುವ ಅಧಿಕೃತರು ಕೃಷಿ ಮಾಡಲಿದ್ದಾರೆ. ಈ ಹಂತದಲ್ಲಿ ಎಲ್ಲ ಲಾಭ-ನಷ್ಟ ಅಧಿಕೃತರಿಗೆ ಮೀಸಲಾಗಿರುತ್ತದೆ. ಲಾಭದಲ್ಲಿ ಹಡೀಲು ಭೂಮಾಲಕರಿಗೆ ಒಂದಂಶ ಸಿಗಲಿದೆ. ಆದರೆ ಇದೊಂದು ಸವಾಲಿನ ಕೆಲಸವಾಗಿದೆ ಎಂದು ಸಚಿವರು ನುಡಿದರು.
ಯೋಜನೆ ಕಾರ್ಯಗತಕ್ಕೆ ಶಾಸಕರಿಂದ ಪೂರ್ಣ ಸಹಕಾರ ಸಿಗಲಿದೆ. ಯೋಜನೆ ಯಶಸ್ವಿಗಾಗಿ ಗ್ರಾಮ ಪಂಚಾಯತ್ಗಳು ಹೆಚ್ಚು ಕಾರ್ಯತತ್ಪರವಾಗಲಿದೆ. ಭೂಮಾಲಕರ ಮನವೊಲಿಸುವ ಹಾಗೂ ಇನ್ನಿತರ ಕಾನೂನಾತ್ಮಕ ಜವಾಬ್ದಾರಿ ಗ್ರಾಮ ಪಂಚಾಯತ್ಗಳ ಪಿಡಿಒಗಳು, ವಿಎ, ಕೃಷಿ ಇಲಾಖೆ ಅಧಿಕಾರಿಗಳ ಮೇಲಿದೆ. ಹಡೀಲು ಭೂಮಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಭತ್ತದ ಬೇಸಾಯ ಮಾಡುವ ಮುಂಚೆ ಉಳುಮೆ, ಬೀಜ, ಬಿತ್ತನೆ, ಯಂತ್ರೋಪಕರಣಗಳ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರೈತ ಮುಖಂಡ ಮನೋಹರ ಶೆಟ್ಟಿ ಹಾಗೂ ಇತರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೃಷಿಕರಿಗೆ ಸರ್ಕಾರದಿಂದ ಸಮಯೋಚಿತ ಹಾಗೂ ಲಾಭದಾಯಕ ಸವಲತ್ತುಗಳು ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗಂಜಿಮಠ ಗ್ರಾಪಂ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾೈಕ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ದಕ ಜಂಟಿ ಕೃಷಿ ನಿರ್ದೇಶಕಿ ಸೀತಾ, ಕೃಷಿ ಉಪ ನಿರ್ದೇಶಕ ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕಿ(ಎಡಿ) ವೀಣಾ, ಚುನಾಯಿತ ಪ್ರತಿನಿಧಿಗಳು, ರೈತರು, ಕಂದಾಯ ಇಲಾಖಾ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
