ಮೂಡುಬಿದಿರೆ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಮೂಡುಬಿದಿರೆ ವಲಯದ ಸಂಘ ಉದ್ಘಾಟನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಮಾಜಮಂದಿರದಲ್ಲಿ ಭಾನುವಾರ ಜರುಗಿತು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಗ್ಯಾರೇಜ್ ಮಾಲಕರ ಸಂಘವನ್ನು ಉದ್ಘಾಟಿಸಿ, ಇಂದು ಮೆಕ್ಯಾನಿಲ್ಗಳು ನೂತನ ತಂತ್ರಜ್ಞಾನಗಳ ಸಹಾಯದಿಂದ ಯಾವುದೇ ವಾಹನವನ್ನು ಉತ್ತಮವಾಗಿ ದುರಸ್ತಿ ಮಾಡಬಲ್ಲರು. ಆದರೆ ಹಿಂದಿನವರು ತಮ್ಮ ನಿಪುಣತೆಯಿಂದ ವಾಹನಗಳನ್ನು ದುರಸ್ತಿಗೊಳಿಸಿ ಇಂದಿಗೂ ನಮ್ಮಲ್ಲಿ ಮನಸ್ಸಿನಲ್ಲಿದ್ದಾರೆ.
ಆದಾಯದ ಮೂಲವನ್ನು ಮಾತ್ರ ನೋಡದೆ ಹಿರಿಯ ಮಾರ್ಗದರ್ಶನ, ಅವರು ಅನುಸರಿಸಿದ ನಿಪುಣತೆ, ಪರಿಶ್ರಮ, ವೃತ್ತಿನಿಷ್ಠೆ, ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ನಡೆದರೆ ಒಬ್ಬ ಉತ್ತಮ ಮೆಕ್ಯಾನಿಕ್ ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಎ.ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಘದ ವತಿಯಿಂದ ಸ್ಪೂರ್ತಿ ಶಾಲೆಗೆ ರೂ.10 ಸಾವಿರ ದೇಣಿಗೆಯನ್ನು ನೀಡಲಾಯಿತು.
ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ದಿನೇಶ್ ಕುಮಾರ್, ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೆಟ್ ಲಿಮಿಡೆಟ್ ಮ್ಯಾನೇಜರ್ ನಿತಿನ್ ಕುಮಾರ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್, ಪವರ್ ಪಾಯಿಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಯಾಗಿದ್ದರು.ಮೂಡುಬಿದಿರೆ ವಲಯ ಕಾರ್ಯದರ್ಶಿ ನವೀನ್ ಕುಂದರ್, ಕೋಶಾಧಿಕಾರಿ ಶಂಕರ್ ಎ.ಕೋಟ್ಯಾನ್ ಉಪಸ್ಥಿತರಿದ್ದರು.
ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
