ಕೋಲಾರ: ಗೊಬ್ಬರ ಕಂಪನಿಗಳ ಗುಲಾಮರಾಗಿ ಅವರಿಷ್ಟಬಂದಂತೆ ಬೆಲೆ ಏರಿಕೆ ಮಾಡಲು ಬಿಡುವುದಾದರೆ ನಾವು ಬೆಳೆದ ತರಕಾರಿ, ಧಾನ್ಯಗಳ ಬೆಲೆ ನಿಗಧಿಗೂ ಅದೇ ಬೆಲೆ ಕೊಡಿಸಿ, ನೀವು ಈ ದೇಶದ ಪ್ರಧಾನಿ ಎಂಬುದನ್ನು ಮರೆಯದಿರಿ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ, ಜನರ ಕಷ್ಟ ನಿಮಗೆ ತಿಳಿಯುದಿಲ್ಲವೇ ಎಂದು ಪ್ರಶ್ನಿಸಿದರು.12kolar2

ಶ್ರೀರಾಮ, ಹನುಮಂತನನ್ನು ಇವರೇನು ಜಹಗೀರು ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಆಡಳಿತವೆಂದರೆ ಕೇಸರಿ ಬಾವುಟ ಕಟ್ಟುವುದಲ್ಲ ಎಂದು ಟಾಂಗ್ ನೀಡಿ, ಅಮಿತ್‌ಷಾರನ್ನು ದುರ್ಯೋಧನನಿಗೆ ಹೋಲಿಸಿದರು. ನಮ್ಮಲ್ಲಿ ಸೀತೆ, ದ್ರೌಪದಿ ಬದುಕಿದ ದೇಶ ಇದು, ಮಹಿಳೆಯರ ಸದೃಢತೆಗೆ ಏನಾದರೂ ಮಾಡಿ, ಬರೀ ಭಾಷಣ ಮಾಡಿದರೆ ಜನರ ಕಷ್ಟ ಪರಿಹಾರವಾಗದು, ಗೊಬ್ಬರದ ಬೆಲೆ ಶೇ.೮೦ ರಷ್ಟು ಏರಿಸಿದ್ದು ಏಕೆ ಎಂಬುದಕ್ಕೆ ಉತ್ತರ ನೀಡಿ, ಯಾವ ಕಚ್ಚಾವಸ್ತುವಿನ ಬೆಲೆ ಏರಿಕೆಯಾಗಿದೆ ಎಂದು ಪ್ರಶ್ನಿಸಿದರು.

ನೀವು ಈ ದೇಶದ ಪಿಎಂ, ಬೇರೆಯವರ ದೂಷಣೆ ಮಾಡಿದ್ದು ಸಾಕು, ನೀವು ಏನು ಮಾಡುತ್ತಿದ್ದೀರಿ ಎಂದು ಹೇಳಿ, ಪೆಟ್ರೋಲ್,ಡೀಸೆಲ್ ಬೆಲೆ ಏರಿಸಿದರೆ ಬಸ್ ದರ ಏರಿಕೆಯಾಗುತ್ತದೆ, ಗೊಬ್ಬರಗಳ ಬೆಲೆ ಏಕಾಏಕಿ ಶೇ.೮೦ ರಷ್ಟು ಏರಿಕೆಗೆ ಕಾರಣ ನೀಡಬೇಕಾದ ಜವಾಬ್ದಾರಿ ನಿಮಗಿಲ್ಲವೇ, ಕಂಪನಿಗಳೇ ತಮಗಿಷ್ಟ ಬಂದಂತೆ ಬೆಲೆ ಏರಿಕೆ ಮಾಡುವುದಾದರೆ ನಿಮ್ಮ ಆಡಳಿತ ಏಕೆ ಬೇಕು ಎಂದು ಟೀಕಿಸಿದರು. ಎತ್ತಿನಹೊಳೆಗೆ ಹಣ ನೀಡದ್ದಕ್ಕೆ ಆಕ್ರೋಶ ಎತ್ತಿನಹೊಳೆ ೧೫ ಸಾವಿರ ಕೋಟಿರೂಗಳ ಯೋಜನೆ ಇದರ ಭೂಸ್ವಾಧೀನದ ಪರಿಹಾರಕ್ಕಾಗಿ ೬೦೦ ಕೋಟಿ ಬಿಡುಗಡೆ ಮಾಡಲು ಇನ್ನಿಲ್ಲದಂತೆ ಕೇಳುತ್ತಿದ್ದೇವೆ, ಹಣ ನೀಡಲು ಈ ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಬೆಂಗಳೂರಿನೋರು ತೊಳೆದುಕೊಂಡು ಬಿಡುವ ನೀರು ನೀಡಲು ಅಸಹಕಾರವಿದೆ, ೧೩೫೦ ಕೋಟಿ ರೂ ಗಳ ಕೆಸಿ ವ್ಯಾಲಿ ಯೋಜನೆಗೆ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಹಣ ನೀಡಿ ಕಾರ್ಯಗತ ಮಾಡಿದ್ದೇವೆ, ಅಂತಹ ಗಲೀಜು ನೀರು ಬಿಡಲು ಇವರಿಂದ ಸಾಧ್ಯವಾಗುತ್ತಿಲ್ಲ, ಒಳ್ಳೆಯ ಕೆಲಸ ಮಾಡಲು ಯೋಗ್ಯತೆ, ಒಳ್ಳೆಯ ಮನಸ್ಸು ಇರಬೇಕು ಎಂದರು.

ಸಹಕಾರ ಸಂಘಗಳ ಮೂಲಕವೇ ದೇಶದ ಆರ್ಥಿಕ ಸ್ವರೂಪ ಬದಲಿಸಬೇಕು, ಬಡವರಿಗೆ ಸಹಾಯ ಸಿಗುವುದಾದರೆ ಸಹಕಾರ ರಂಗದಿಂದ ಮಾತ್ರ ಎಂದ ಅವರು, ಇಂತಹ ಸಂಸ್ಥೆಗಳನ್ನು ಈ ಸರ್ಕಾರ ನಂಬುತ್ತಿಲ್ಲ, ಸರ್ಕಾರದ ವಿವಿಧ ಇಲಾಖೆಗಳ ೪ ಸಾವಿರ ಕೋಟಿ ರೂ ಟೋಪಿ ಹಾಕಿಸಿಕೊಳ್ಳುವ ವಾಣಿಜ್ಯ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ಕೆ.ವಿ.ದಯಾನಂದ್, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ,ರೈತ ಚಂದ್ರಶೇಖರ್, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ, ಮುಖಂಡರಾದ ಅಗ್ನಿಹಳ್ಳಿ ನಾಗರಾಜ್, ನಿರ್ದೇಶಕರಾದ ಮುನಿವೆಂಕಟಪ್ಪ, ವಿ.ಬ್ಯಾಟಪ್ಪ, ವಿ.ಸುಬ್ರಮಣಿ, ಲಕ್ಷ್ಮಮ್ಮ, ಸಿಇಒ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನಿಂದ ನಡೆದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ ಗೊಬ್ಬರಗಳ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕೇಂದ್ರದ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

By suddi9

Leave a Reply

Your email address will not be published. Required fields are marked *