ಬಂಟ್ವಾಳ: ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಯುವಕನಿಗೆ ಚಾಕುವಿನಿಂದ ತಲೆ ಮತ್ತು ಮುಖಕ್ಕೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆ ಇನ್ಸ್ ಪೆಕ್ಟರ್ ಚೆಲುವರಾಜು ನೇತೃತ್ವದಲ್ಲಿ ಪೊಲೀಸರು ಪ್ರತ್ಯೇಕ ಮೂರು ತಂಡ ರಚಿಸಿದ್ದಾರೆ.
ಗಾಯಾಳು ಬ್ರಹ್ಮರಕೂಟ್ಲು ಉಮನೊಟ್ಟು ನಿವಾಸಿ ಭೋಜ ಸಪಲ್ಯ ಎಂಬವರ ಪುತ್ರ ಮನೋಜ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಇವರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ವಿದೇಶದ ಕಂಪೆನಿಯೊಂದರಲ್ಲಿ ಎಂಜಿಯರ್ ಆಗಿದ್ದ ಮನೋಜ್ ಗೆ ವಿವಾಹ ನಿಶ್ಚಯವಾಗಿದ್ದು, ಕಳೆದ ಮೂರು ತಿಂಗಳಿನಿಂದ ಮನೆಯಿಂದಲೇ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಎಂದಿನಂತೆ ದ್ವಿಚಕ್ರ ವಾಹನದಲ್ಲಿ ಬಿ.ಸಿ.ರೋಡಿಗೆ ಬಂದಿದ್ದ ಅವರು ರಾತ್ರಿ ಎಂಟು ಗಂಟೆಗೆ ಅಜ್ಜಿಬೆಟ್ಟು ತಿರುವು ರಸ್ತೆ ಬದಿ ಎಚ್ ಡಿ ಎಫ್ ಸಿ ಎಟಿಎಂ ನಿಂದ ಹಣ ತೆಗೆದು ಕೈನೆಟಿಕ್ ಬಳಿ ಬರುತ್ತಿದ್ದಂತೆಯೇ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಏಕಾಯೇಕಿ ತಲೆ ಮತ್ತು ಮುಖಕ್ಕೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದರು.
ಇಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಭೋಜ ಸಪಲ್ಯರಿಗೆ ಒಬ್ಬನೇ ಪುತ್ರನಾಗಿದ್ದರೂ ಮನೋಜ್ ತನ್ನ ಅಣ್ಣನೊಂದಿಗೆ ವೈಮನಸ್ಸು ಹೊಂದಿದ್ದು, ಇದಕ್ಕಾಗಿ ಆತನ ಸಹೋದರ ಕಿಶೋರ್ ಹಲಕ್ಲೆ ನಡೆಸಿದ್ದಾನೆ ಎಂಬ ಕಪೋಲಕಲ್ಪಿತ ಕಟ್ಟುಕಥೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಗಾಯಾಳುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶದಿಂದ ತನ್ನ ವಿವಾಹಕ್ಕಾಗಿ ಬಂದಿರುವ ಮನೋಜ್ ತೀರ ಸೌಮ್ಯ ಸ್ವಭಾವ ಮತ್ತು ಯಾವುದೇ ಚಟುವಟಿಕೆಯಲ್ಲಿ ಬೆರೆಯದಿದ್ದರೂ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಖಂಡನೀಯ. ಈ ಕೃತ್ಯದಲ್ಲಿ ಪಾಲ್ಗೊಂಡ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಆಗ್ರಹಿಸಿದ್ದಾರೆ.
