ಕೆಜಿಎಫ್ : ಪ್ರತಿಯೊಬ್ಬ ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಖೆಯಾ ಕರುಣಾಕರನ್ ಅವರು ಕರೆ ನೀಡಿದರು.
ಅವರು ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಡಿ.ಎ.ಆರ್.ನ ಎಆರ್ಎಸ್ಐ ಯು.ಪ್ರಕಾಶನ್ ಮತ್ತು ನರಸಿಂಹನ್ ಅವರು ಮಾ.೩೧ ರಂದು ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಹಾಗೂ ಕೋಲಾರಕ್ಕೆ ವರ್ಗವಾಗಿರುವ ಜಿಲ್ಲಾ ಪೊಲೀಸ್ ಕಛೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಮಿಥನ್ರಾಜ್ ಅವರುಗಳಿಗೆ ಏರ್ಪಡಿಸಿದ್ದ, ಹಾರ್ಥಿಕ ಬಿಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಎಆರ್ಎಸ್ಐ ಯು.ಪ್ರಕಾಶನ್ ಮತ್ತು ನರಸಿಂಹನ್ ಅವರುಗಳು ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆಯಲ್ಲಿನ ವಿವಿಧ ವಿಭಾಗ, ಶಾಖೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ. ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಎಲ್ಲಾ ಉದ್ಯೋಗಿಗಳಿಗೆ ನಿವೃತ್ತಿ ಹಾಗೂ ವರ್ಗಾವಣೆಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.
ನಿವೃತ್ತರಾದ ಎಆರ್ಎಸ್ಐ ಯು.ಪ್ರಕಾಶನ್, ನರಸಿಂಹನ್ ಮತ್ತು ವರ್ಗವಾದ ಪ್ರಥಮ ದರ್ಜೆ ಸಹಾಯಕ ಎಂ.ಮಿಥನ್ರಾಜ್ ಅವರುಗಳಿಗೆ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಡಿವೈಎಸ್ಪಿ ಬಿ.ಕೆ.ಉಮೇಶ್ ಅವರು ಮಾತನಾಡಿ, ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿಸ್ತಂತು ಪೊಲೀಸ್ ಇನ್ಸ್ಪೆಕ್ಟರ್ ನಾಗಪ್ಪ ಖಾನಾಪೂರ, ಪಿಎಸ್ಐ ಎನ್.ಜಿ.ಚೌಡಪ್ಪ, ಎಂ.ಎಲ್.ಮುನಿಯಪ್ಪ, ಶಾಖಾಧೀಕ್ಷಕರಾದ ಎಂ.ಮೂರ್ತಿ, ಎ.ನಜೀಮಾಬಾನು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ಕಛೇರಿಯ ಗೋಪಾಲಕೃಷ್ಣ, ಜಗದೀಶ್, ವಿ.ಮಂಜುನಾಥ, ಸಯ್ಯದ್ ಮುಸ್ತಾಕ್ ಅಹ್ಮದ್ ಅವರುಗಳು ಸನ್ಮಾನಿತರ ಕುರಿತು ಮಾತನಾಡಿದರು. ಮೊದಲೀಗೆ ಮುಖ್ಯಪೇದೆ ಬಿ.ಮಂಜುನಾಥ ಅವರಿಂದ ಪ್ರಾರ್ಥನೆ, ಆರ್ಎಸ್ಐ ಜಿ.ಹೆಚ್. ಜಗದೀಶ್ ಅವರಿಂದ ಸ್ವಾಗತ, ಭೀಮಸೇನ್ ಕಾಂಬ್ಳೆ ಅವರಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಮತ್ತು ವಂದನೆಗಳಾದವು.
