ಶ್ರೀನಿವಾಸಪುರ: ಅಸ್ಪೃಶ್ಯತೆ ಸಾಮಾಜಿಕ ಕಳಂಕವಾಗಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ತೊಡೆದು ಹಾಕಲು ಸಮಾಜದ ಎಲ್ಲ ವರ್ಗದ ಜನ ಪ್ರಯತ್ನ ಮಾಡಬೇಕು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಜನ್ಮಭೂಮಿ ಸಾಂಸ್ಕೃತಿಕ ಮತ್ತು ಕ್ರೀಡಾ ಗ್ರಾಮೀಣಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತಾ ನಿವಾರಣಾ ಸಪ್ತಾಹದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಮಾತನಾಡಿ, ಮಾನವ ಕುಲ ಒಂದೇ ಎಂಬ ಮಾತನ್ನು ಕನ್ನಡದ ಆದಿ ಕವಿ ಪಂಪನಿಂದ ಹಿಡಿದು ಎಲ್ಲ ದಾರ್ಶನಿಕರೂ ಹೇಳಿದ್ದಾರೆ. ಮಾನವೀಯತೆ ಅರಳಿದಾಗ ಮಾತ್ರ ಸಮಾಜ ಸುಂದರ ಹೂದೋಟದಂತೆ ಕಂಗೊಳಿಸಲು ಸಾಧ್ಯವಾಗುತ್ತದೆ. ಎಂದು ಹೇಳಿದರು. ಸಮಾಜ ಸೇವಕ ಡಾ.ಅರಿವು ಶಿವಪ್ಪ ಮಾತನಾಡಿ, ಸಾಮಾಜಿಕ ಪರಿವರ್ತನೆ ಇಂದಿನ ಅಗತ್ಯವಾಗಿದೆ. ಅಳಿದುಳಿದಿರುವ ಅಸ್ಪೃಶ್ಯ ಭಾವವನ್ನು ಮನಸ್ಸಿನಿಂದ ಕಿತ್ತೆಸೆಯಬೇಕಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ರೇಷ್ಮೆ ಇಲಾಖೆ ಅಧಿಕಾರಿ ಶ್ರೀನಿವಾಸಯ್ಯ, ಬಿಸಿಎಂ ಅಧಿಕಾರಿ ಬೀರೇಗೌಡ, ದಲಿತ ಪರ ಸಂಘಟನೆಗಳ ಮುಖಂಡರಾದ ರಾಮಾಂಜಮ್ಮ, ವರ್ತನಹಳ್ಳಿ ವೆಂಕಟೇಶ್, ಪಾಪಣ್ಣ, ರಾಜೇಶ್, ಸುರೇಶ್, ಲಕ್ಷ್ಮೀ, ಜಾನಪದ ಗಾಯಕ ಹೊದಲಿ ನಾರಾಯಣಸ್ವಾಮಿ ಇದ್ದರು.
