ಮಕ್ಕಳು ನಮ್ಮ ಮುಂದೆ ಆಳೆತ್ತರಕ್ಕೆ ಬೆಳೆದುನಿಂತರೂ ಅವರು ಬೆಳೆದಿರುವುದು ನಮಗೆ ಗೊತ್ತಾಗುವುದೇ ಇಲ್ಲ. ಮಕ್ಕಳು ಹರೆಯಕ್ಕೆ ಕಾಲಿರಿಸಿದಂತೆ ಸಂವೇದನೆಗಳು ಜಾಗೃತವಾಗುತ್ತವೆ. ಅದ್ಯಾವುದೋ ರೆಸ್ಪೆಕ್ಟ್ ಅಂತಾರಲ್ಲಿ ಅದು ಸಿಗ್ಬೇಕು ಎಂದು ಕಾಯ್ತಾ ಇರ್ತಾರೆ. ಈ ಜಗತ್ತೇ ತನ್ನ ಗಮನಿಸ್ತಿದೆ ಎಂದೆಲ್ಲಾ ಭಾವನೆ ಶುರುವಾಗೋ ವಯಸ್ಸದು.
ನಮ್ಮ ಮಕ್ಕಳು ಆಳೆತ್ತರದವರೆಗೆ ನಿಂತರೂ ತಂದೆ ಎಂಬ ಮಹಾಶಯನಿಗೆ ಅರ್ಥವಾಗುವುದೇ ಇಲ್ಲ. ಆಕೆ ಒಂಚೂರು ತಪ್ಪು ಮಾಡಿದ್ರೂ ಆಕೆಯ ಬೆನ್ನಿಗೆ ದಪದಪ ಹೊಡಿತಾನೆ, ಇನ್ನು ಮಗನೂ ಅಷ್ಟೆ. ಏನಾದ್ರೂ ತರ್ಲೆ ಮಾಡಿಕೊಂಡರೆ ಆತನನ್ನು ಎಲ್ಲರೆದುರು ಆತನ ಮಾನಕಳೆದು ಬೀದಿ ರಂಪ ಮಾಡಿಬಿಡುತ್ತಾನೆ. ಇದೆಲ್ಲಾ ಮನೆಯಲ್ಲಿ ನಿತ್ಯ ನಡೆಯುವ ವಿಷ್ಯಗಳಾದರೂ ನಮಗೆ ಇದರ ಪರಿಣಾಮ ಗೊತ್ತಾಗುವುದೇ ಇಲ್ಲ, ತಂದೆ ತನ್ನ ಮಗಳಿಗೆ ಹೊಡಿತಾನೆ ಇದೆಲ್ಲಾ ನಾವು ಮಾಮೂಲಿ ಎಂದು ಹಿಂದೆ ಸರಿಯುವ ವಿಷಯ ಖಂಡಿತಾ ಇದಲ್ಲ.
ಈ ಕವಿಹೃದಯ, ಭಾವಜೀವ ಅವರೇ ಜಗತ್ತಲ್ಲಿ ಜಾಸ್ತಿ ನೊಂದುಕೊಳ್ಳುವುದು. ಅವರಿಗೆ ಒಂದು ಚಿಕ್ಕ ಘಟನೆಗಳೂ ಅವರನ್ನು ದಿನವಿಡೀ ನೋವಿನಲ್ಲಿರಿಸುತ್ತದೆ. ಕ್ಲಾಸಲ್ಲೂ ಅಷ್ಟೆ ಯಾರೋ ಒಂದು ಮಾತು ಅಂದಿರ್ತಾರೆ.. ಅದಕ್ಕೆ ಇಡೀ ದಿನ ನೋವನ್ನು ಅನುಭವಿಸುವ ಹುಡುಗಿಯರಿರ್ತಾರೆ. ತನಗಾದ ನೋವನ್ನು ಇನ್ನೊಬ್ಬರಲ್ಲಿ ಹೇಳೋಣ ಎಂದು ಬಹಳ ಆಸೆ ಇರುತ್ತದೆ. ಆದರೆ ಯಾರೂ ಸಿಗುವುದೇ ಇಲ್ಲ.
ಇನ್ನು ಮನೆಗೆ ಬಂದು ತಂದೆಯಲ್ಲಿ ಹೇಳೋಣವೆಂದ್ರೆ ಆತ ಯಾವಾಗ್ಲೂ ಬೈಯ್ಯುತ್ತಾ, ಬೆದರಿಸುತ್ತಾ ಆತನದ್ದೇ ಲೋಕದಲ್ಲಿ ವಿಹರಿಸುತ್ತಾನೆ. ಇನ್ನು ತಾಯಿಯೂ ಅಷ್ಟೆ ಆಕೆದ್ದೂ ಒಂದು ವಿಚಿತ್ರ ಲೋಕ. ತಂದೆ ತಾಯಿ ಇಬ್ಬರಿಗೂ ಯಾರನ್ನೂ ಅರ್ಥಮಾಡಿಕೊಳ್ಳುವಷ್ಟು ಪುರುಸೊತ್ತಿರುವುದಿಲ್ಲ.
ಆಕೆ ಪಿಯುಸಿ ಹುಡುಗಿ. ಹೆಸ್ರು ಲತಾ ಅಂತ. ಆಕೆದ್ದು ಕವಿ ಹೃದಯ, ಭಾವಜೀವಿ. ಪ್ರತಿಯೊಂದಕ್ಕೂ ಸ್ಪಂದಿಸುವುದು ಆಕೆಯ ಗುಣ. ವಯಸ್ಸಿಗಿಂತ ಭಿನ್ನವಾಗಿ ಯೋಚಿಸುವುದು ಆಕೆಯ ಗುಣ. ಸಂಜೆ ಮನೆಗೆ ಬಂದು ಚಿಕ್ಕ ಮಕ್ಕಳಿಗೆ ಟ್ಯೂಷನ್ ಕೊಡ್ತಾಳೆ. ಪುರುಸೊತ್ತಿದ್ದರೆ ಭರತನಾಟ್ಯ ಕ್ಲಾಸಿಗೆ ಹೋಗ್ತಾಳೆ. ಕಾರ್ಯಕ್ರಮದಲ್ಲಿ ಈಕೆಯದ್ದೊಂದು ಧೀಂತಕಿಟ ಭರತನಾಟ್ಯ ಕಾರ್ಯಕ್ರಮ ಇದ್ದೇ ಇರುತ್ತದೆ. ಅಲ್ಲದೆ ವಾಲಿಬಾಲ್, ಥ್ರೋಬಾಲ್ ಆಡಿ ಕೆಲವೊಂದು ಕಡೆ ಪ್ರೈಸೂ ಬಂದಿದೆ.
ಇತ್ತೀಚೆಗೆ ಕಾದಂಬರಿ, ಪುಸ್ತಕಗಳನ್ನು ಓದಿಕೊಳ್ಳಲು ಅಭ್ಯಾಸ ಮಾಡಿಕೊಂಡಿದ್ದಳು, ಮಾತೆತ್ತಿದರೆ ಸಾಕು ವಿವೇಕಾನಂದ, ಪರಮಹಂಸ ಅಂತ ಒಂದಷ್ಟು ಗಂಟೆ ಲೆಕ್ಚರ್ ಕೊಡಬಳ್ಳಲು. ಈ ವಯಸ್ಸಲ್ಲಿ ಹಾಗೆ ಎಲ್ಲವೂ ಚಂದ ಚಂದ ಕಾಣುತ್ತದೆ. ಹುಡುಗ ಕ್ಲಾಸಿಗೆ ತಲೆಬಾಚದೆ ಬಂದ್ರೂ ಚಂದ ಕಾಣ್ತಾನೆ. ಇಷ್ಟೆಲ್ಲಾ ಬುದ್ಧಿವಂತಿಕೆ ಬೆಳೆಸಿಕೊಂಡ ಹುಡಗಿಯ ಬಗ್ಗೆ ಆಕೆಯ ತಂದೆಗೆ ಗೊತ್ತಿರುವುದಿಲ್ಲ. ಇದನ್ನು ಕೇಳೋಕೆ ಆತನಿಗೆ ಪುರುಸೊತ್ತೂ ಸಹ ಇರುವುದಿಲ್ಲ.
ಆಕೆ ಒಬ್ಬ ತಮ್ಮ ಇದ್ದ. ಪ್ರತಿಯೊಂದಕ್ಕೂ ತರ್ಲೆ ಮಾಡುವುದು ಆತ ಗುಣ. ಪ್ರತೀ ದಿನ ಅಕ್ಕನಿಗೆ ಹೊಡೆಯದಿದ್ದರೆ ಆತನಿಗೆ ನಿದ್ದೆಯೇ ಬರುವುದಿಲ್ಲವೇನೋ?
ಆಗ ಒಂದು ಘಟನೆ ನಡೆಯಿತು.. ತಮ್ಮ- ಅಕ್ಕನಿಗೆ ಜೋರು ಜಗಳ ನಡೆದು ಸಿಟ್ಟಲ್ಲಿದ್ದ ಲತಾ ತಮ್ಮನಗೆ ಒಂದೇಟು ಹೊಡೆದೇ ಬಿಟ್ಟಳು.. ತಮ್ಮನಿಗೆ ಅಷ್ಟೇ ಸಾಕಿತ್ತು ಅಕ್ಕನಿಂದ ಪೆಟ್ಟುತಿಂದ ತಮ್ಮ ಒಂದೇ ಸಮನೆ ಅತ್ತು ಕೂಗಾಡಿ ರಂಪ ಮಾಡಿದ.
ಇಷ್ಟೊತ್ತಾಗುವಾಗ ಒಳಗಡೆ ಇದ್ದ ತಂದೆಯ ಪಿತ್ತ ನೆತ್ತಿಗೇರಿತ್ತು. ಏನು ಎತ್ತ ಎಂದು ಯೋಚಿಸ್ಲೇ ಇಲ್ಲ. ಯಾರದ್ದು ತಪ್ಪು ಯಾರದ್ದು ಸರಿ ಎಂದು ವಿಚಾರಿಸಲೇ ಇಲ್ಲ. ಲತಾಳ ಬೆನ್ನಿಗೆ ಒಂದೇ ಸಮನೆ ದಫದಫ ಅಂತ ಹೊಡೆದೇ ಬಿಟ್ಟ. ಲತಾಳಿಗೆ ಜೋರು ನೋವಾಯ್ತು.
ಲತಾಳಿಗೆ ಪೆಟ್ಟುಬಿದ್ದದಕ್ಕಿಂತಲೂ ಹೆಚ್ಚು ಮನಸ್ಸಿಗೆ ನೋವಾಗಿತ್ತು. ಒಂದೇ ಸಮನೆ ಅಳುತ್ತಾ ಇದ್ದಳು. ಆಕೆಗೆ ಈ ವೇಳೆ ಸಾಂತ್ವಾನ ನೀಡುವ ವ್ಯಕ್ತಿ ಬೇಕಾಗಿತ್ತು ಆದ್ರೆ ಯಾರೂ ಕೂಡಾ ಸಿಗಲೇ ಇಲ್ಲ.
ನನ್ನ ತಮ್ಮನೇತಪ್ಪು ಮಾಡಿದ್ದು. ಆದ್ರೂ ನನಗೆ ಹೊಡೆತ ಬಿತ್ತು. ನನಗೆ ವಯಸ್ಸಾಗಿದೆ ಈ ವಯಸ್ಸಲ್ಲಿ ಹೊಡಿತಾರಾ ಎಂಬುದು ಲತಾಳ ಪ್ರಶ್ನೆ. ಮಗಳು ತರ್ಲೆ ಮಾಡಿದ್ದಾಳೆ, ನಾನು ಆಕೆಗೆ ಎರಡೇಟು ಬಿಗಿದದ್ದು ಸರಿಯಾಗಿಯೇ ಇದೆ ಎಂಬುದು ತಂದೆಯ ಆಲೋಚನೆ.
ತಂದೆ ಬುದ್ಧಿಗೆ ಎರಡೇಟು ಹೊಡೆದ ಎಂದು ನಾವು ಇಲ್ಲಿ ಅಲ್ಲಗಳೆಯುವಂತಿಲ್ಲ. ಮಗಳ ಪ್ರಾಯವನ್ನು ಆಕೆಯನ್ನು ಅರ್ಥ ಮಾಡಿಕೊಳ್ಳದೆ ತಂದೆ ಹೊಡೆದನಲ್ಲ. ಇದು ಅಕ್ಷ್ಯಮ್ಯ ತಪ್ಪು. ಮಗಳಿಗೆ ನಾಟುವ ರೀತಿಯಲ್ಲಿ ಗೆಳೆಯನ ರೀತಿಯಲ್ಲಿ ತನ್ನ ಮಗಳಿಗೆ ಬುದ್ದಿ ಹೇಳಿದ್ದರೆ ಆಕೆಗೆ ತನ್ನ ತಂದೆ ಒಬ್ಬ ಹೀರಾಓ ಆಗ್ತಿದ್ದ.
ಇನ್ನು ಲವ್, ಸೆಕ್ಸ್, ದೋಖಾ ಶುರುವಾಗುವುದೂ ಕೂಡಾ ಇದೇ ವಯಸ್ಸಲ್ಲಿ.
ತನ್ನ ಭಾವನೆಯನ್ನು ಶೇರ್ ಮಾಡಿಕೊಳ್ಳಲು ಒಬ್ಬ ಹುಡುಗನನ್ನು ಆಕೆ ಹುಡುಕುತ್ತಾ ಇರುತ್ತಾಳೆ. ಕೊನೆಗೆ ಹೇಗೋ ಆಕೆ ಮೊಬೈಲ್ಗೆ ಒಂದು ಮೆಸೇಜ್ ಬಂದಿರುತ್ತದೆ. ಆತ ನಿನ್ನದು ಫ್ರೆಂಡ್ಶಿಪ್ ಮಾತ್ರ ಸಾಕು ಅನ್ನುತ್ತಾನೆ. ಈಕೆಯೂ ಸಹ ಆತನನ್ನು ಫ್ರೆಂಡ್ ಆಗಿಯೇ ಇಟ್ಟುಕೊಳ್ಳೋಣ ಅಂತಲೇ ಇರುತ್ತದೆ. ಮೆಸೇಜಲ್ಲೇ ಇಬ್ಬರ ಭಾವನೆಯೂ ಶೇರ್ ಆಗ್ತಾ ಇರುತ್ತದೆ. ಕೊನೆಗೆ ಅವರಿಬ್ಬರಿಗೂ ಲವ್ ಉಂಟಾಗುತ್ತದೆ. ಅದು ಎಷ್ಟು ಬೆಳೆದಿರುತ್ತದೆ ಎಂದರೆ ಅವರಿಬ್ಬರೂ ಮನೆಯಂಗಳವನ್ನು ಅಷ್ಟೊತ್ತಿಗೆ ದಾಟಿ ಬಂದಿರುತ್ತಾರೆ. ನಮ್ಮ ಮಕ್ಕಳು ನಮ್ಮಿಂದ ದೂರ ಸರಿಯಬಾರದೆಂದರೆ ಅವರಿಗೆ ಹೊಡಿಬಾರದು. ಅವರೊಂದಿಗೆ ಫ್ರೆಂಡ್ಲಿಯಾಗಿದ್ದು, ಅವರೊಂದಿಗೆ ನಾವಾಗಿದ್ದರೆ ನಮ್ಮ ಮಕ್ಕಳು ನಮ್ಮ ಜೊತೆಯೇ ಕೊನೆ ತನಕ ಇರ್ತಾರೆ,
ಶ್ ಅದಕ್ಕೇ ಹೇಳಿದ್ದು ಪಿಯುಸಿ ಹುಡುಗಿಯರಿಗೆ ಹೊಡಿಬಾರ್ದು ಅಂತ…

