ಬಂಟ್ವಾಳ:ಅವಿಭಜಿತ ಜಿಲ್ಲೆಯಲ್ಲಿ ಸತ್ಯ ಮತ್ತು ನ್ಯಾಯ ಪಾಲನೆ ಜೊತೆಗೆ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಗರಡಿ ಮೂಲಕ ಭಕ್ತಿಯ ತಾಣವಾಗಿ ರೂಪುಗೊಂಡಿದ್ದ ಕೋಟಿ-ಚೆನ್ನಯರು ನಮಗೆ ಆದರ್ಶರಾಗಿದ್ದಾರೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿ ವತಿಯಿಂದ ಶನಿವಾರ ಸಂಜೆ ರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಟ್ರಸ್ಟಿನ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅವಿಭಜಿತ ಜಿಲ್ಲೆಯಲ್ಲಿ ಒಟ್ಟು ೨೮೦ ಗರಡಿಗಳ ಪೈಕಿ ೧೨ ಮಾತ್ರ ಬಿಲ್ಲವರ ಆಡಳಿತದಲ್ಲಿದೆ. ಇದರಿಂದಾಗಿ ಕೋಟಿ-ಚೆನ್ನಯರು ಎಲ್ಲಾ ಜಾತಿ,ಧರ್ಮ ಮತ್ತು ಭಾಷೆ ಮೀರಿ ಬೆಳೆದಿದ್ದರು ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದರು.
ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಶಸ್ತ್ರಾಭ್ಯಾಸ ಪಡೆದಿದ್ದ ಕೋಟಿ-ಚೆನ್ನಯರು ಜೀವಿತಾವಧಿಯಲ್ಲೇ ೬೬ ಕಡೆಗಳಲ್ಲಿ ಗರಡಿ ನಿರ್ಮಿಸಿದ್ದಾರೆ. ಕಳೆದ ೫೦೦ ವರ್ಷಗ ಳಿಂದ ಕತ್ತಲೆಯಲ್ಲೇ ಉಳಿದ ಪಡುಮಲೆ ಇದೀಗ ನೈಜ ಇತಿಹಾಸ ಮತ್ತು ಸತ್ಯದ ವಿಚಾರ ಬೆಳಕಿಗೆ ಬರುತ್ತಿದೆ. ದಕ್ಷಿಣ ಭಾರತದಲ್ಲಿ ತಿರುಪತಿ, ಶಬರಿಮಲೆ ಬಳಿಕ ಪಡುಮಲೆ ಜನಪ್ರಿಯ ಭಕ್ತಿಯ ತಾಣವಾಗಲಿದೆ ಎಂದು ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಯ ವ್ಯಕ್ತಪಡಿಸಿದ್ದಾರೆ.
ಈ ಕಾರಣಿಕ ಕೇಂದ್ರದಲ್ಲಿ ಏ.೨೩ ಮತ್ತು ೨೪ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಅಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರರು ಭಾಗವಹಿಸುವರು ಎಂದು ಅವರು ವಿವರಿಸಿದರು.
ಆಡಳಿತ ಮೊಕ್ತೇಸರ ಚಿತ್ರನಟ ವಿನೋದ ಆಳ್ವ ಮಾತನಾಡಿ, ಕೋಟಿ-ಚೆನ್ನಯರು ಮತ್ತು ಅವರ ತಾಯಿ ಸ್ವರ್ಣ ಕೇದಗೆ ಯಾನೆ ದೇಯಿ ಬೈದೆದಿ ಇವರಿಗೆ ಆಶ್ರಯ ನೀಡಿದ್ದ ಅಂದಿನ ರಾಜ ಪೆರ್ಮಲೆ ಬಲ್ಲಾಳರಿಗೆ ಸಂಬಂಧಪಟ್ಟ ೨೦ಕ್ಕೂ ಮಿಕ್ಕಿ ಐತಿಹಾಸಿಕ ಸ್ಥಳ ಇಲ್ಲಿದೆ ಎಂದರು.
ಟ್ರಸ್ಟಿನ ಗೌರವಾಧ್ಯಕ್ಷ ರಂಜನ್ ಮಿಜಾರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ರವೀಂದ್ರ ಕಂಬಳಿ, ಕೆ.ಕಮಲಾಕ್ಷಿ ಪೂಜಾರಿ, ಪ್ರಮುಖರಾದ ಭುವನೇಶ ಪಚ್ಚಿನಡ್ಕ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಕಾಶ ಅಂಚನ್ ಮತ್ತಿತರರು ಇದ್ದರು.ಡೊಂಬಯ ಅರಳ ಸ್ವಾಗತಿಸಿ, ಸುರ್ಶನ್ ಬಜ ವಂದಿಸಿದರು.
