ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 20ರಂದು ಅಮ್ಮನವರಿಗೆ ಪೊಳಲಿ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನೂರಾರು ಭಕ್ತ ಸಮುದಾಯದ ಸಮ್ಮುಖದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳ ಮೂಲಕ ವಿದ್ಯುಕ್ತವಾಗಿ `ಕಲಾಶಭಿಷೇಕ’ ನಡೆಯಿತು.
ಕ್ಷೀರ, ಜಲ, ತುಪ್ಪ ಮತ್ತಿತರ ಪರಿಶುದ್ಧ ಅವಿಸ್ಸುಗಳಿಂದ ದೇವರಿಗೆ ಅಭಿಷೇಕ ನಡೆಯುತ್ತಿದ್ದಾಗ, ನೆರೆದಿದ್ದ ಭಕ್ತರು ಅಮ್ಮನವರಿಗೆ ಜಯಘೋಷ ಹಾಕಿದರು. ನಿರಂತರ ವಾದ್ಯಷೋಷ, ಓಲಗ, ಬ್ಯಾಂಡ್ ನಾದ ಭಕ್ತರಲ್ಲಿ ಭಕ್ತಿ ಪರಾಕಾಷ್ಠೆ ಮತ್ತಷ್ಟು ಹೆಚ್ಚಿಸುವಂತಿತ್ತು. ಪೂಜೆ ವೇಳೆ ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೆರೆದಿದ್ದ ನೂರಾರು ಭಕ್ತರು ಅಮ್ಮನವರ ಪೂಜಾ ವಿಧಿ-ವಿಧಾನ ಕಣ್ತುಂಬಿಸಿಕೊಂಡರು.
ಒಂದಡೆ ಸರತಿ ಸಾಲಲ್ಲಿ ನಿಂತಿದ್ದ ಭಕ್ತಗಣ ಸರ್ವಾಂಲಕೃತಭೂಷಿತೆಯಾಗಿದ್ದ ಶ್ರೀ ರಾಜರಾಜೇಶ್ವರಿಯನ್ನು ಮತ್ತಷ್ಟು ಹತ್ತಿರದಿಂದ ಕಾಣಲು ತುದಿಗಾಲಲ್ಲಿ ನಿಂತಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾೈಕ್, ಮಾಜಿ ಸಚಿವ ಬಿ. ರಮಾನಾಥ ರೈ, ಜಿಪಂ ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯ ಯಶವಂತ ಪೂಜಾರಿ, ಕರಿಯಂಗಳ ಗ್ರಾಪಂ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ನಾರಾಯಣ ಭಟ್, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಪ್ರಮುಖರಾದ ಸುಭಾಸ್ ನಾೈಕ್ ಉಳಿಪಾಡಿಗುತ್ತು, ಕೃಷ್ಣಕುಮಾರ್ ಪೂಂಜ, ಅರುಣ್ ಆಳ್ವ ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರು ಪಾಲ್ಗೊಂಡರು.
ಫೆ. 13ರಿಂದ ದೇವಸ್ಥಾನದ ಒಳಾಂಗಣದಲ್ಲಿ ಹೋಮ, ಹವನಾದಿಗಳು ನಡೆಯುತ್ತಿದ್ದು, ಫೆ. 20ರಂದೂ ಈ ಪೂಜಾ ವಿಧಿ-ವಿಧಾನಗಳು ಮುಂದುವರಿಯಿತು. ಒಳಾಂಗಣದಲ್ಲಿ ಎಳೆಯಲು ಕಿರು ರಥ ಸಿದ್ಧಗೊಂಡಿದೆ. ಅತ್ತ ಚೆಂಡಿನ ಗದ್ದೆಯಲ್ಲಿ ನಿರಂತರ ಫಲಾಹಾರ ಹಾಗೂ ಊಟೋಪಚಾರ ಮುಂದುವರಿದಿದ್ದು, ಸ್ವಯಂ-ಸೇವಕರು ಕಿಂಚಿತ್ತೂ ನ್ಯೂನತೆ ಬರದಂತೆ ಭಕ್ತರ ಸೇವೆಯಲ್ಲಿ ನಿರತರಾಗಿದ್ದಾರೆ. ಎಂದಿನಂತೆ ಈ ಬಾರಿಯೂ ದೇವಸ್ಥಾನದ ಸುತ್ತಲ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
