ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಇವರು ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಮಂಗಳವಾರ ನಡೆದ ೩೬ನೇ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೧ನೇ ಪಂದ್ಯದ ಜಾವಲಿನ್ (ಈಟಿ) ಎಸೆತದಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಗಳಿಸಿದ್ದಾರೆ.

ಈಕೆ ಸಂಗಬೆಟ್ಟು ಗ್ರಾಮದ ಮಾಲ್ದಾಡು ನಿವಾಸಿ ರವೀಂದ್ರ ಜೈನ್ ಮತ್ತು ಪದ್ಮಶ್ರೀ ಜೈನ್ ದಂಪತಿಯ ಪುತ್ರಿ. ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ಶಿಕ್ಷಣ ಸಂಸ್ಥೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಸಂಸ್ಥಾಪಕ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
